ಚಿಕ್ಕಮಗಳೂರು: ಪಾಕಿಸ್ತಾನದ ಉಗ್ರರ ಹುಟ್ಟಡಗಿಸಲು ಭಾರತೀಯ ಸೇನೆಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಿಂದ 10 ಲಕ್ಷ ರೂ. ದೇಣಿಗೆ ನೀಡಲಾಗಿದೆ. ಕಳಸ ತಾಲೂಕಿನ ಆದಿಶಕ್ತ್ಯಾತ್ಮಕ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಅವರಿಗೆ ಈ ಹಣವನ್ನು ಹಸ್ತಾಂತರ ಮಾಡಲಾಗಿದೆ. ಕ್ಷೇತ್ರದ 5ನೇ ಧರ್ಮಕರ್ತರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಧರ್ಮಕರ್ತ ಭೀಮೇಶ್ವರ ಜೋಶಿಯವರು ಚೆಕ್ ಹಸ್ತಾಂತರಿಸಿದರು.
ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಗುರುವಾರ ರಾತ್ರಿ ಪಾಕ್ ವಿರುದ್ಧ ಭಾರತ ಮಿಸೈಲ್ಗಳ ಮಳೆ ಸುರಿಸಿದೆ. ಈ ವೇಳೆ ಪಾಕ್ ಸಹ ದಾಳಿ ನಡೆಸಿದೆ. ಆದರೆ ಭಾರತೀಯ ಸೇನೆ ಆ ದಾಳಿಯನ್ನು ವಿಫಲಗೊಳಿಸಿದೆ. ಇದರ ಬೆನ್ನಲ್ಲೇ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಪಾಕ್ ತತ್ತರಿಸಿ ಹೋಗಿದೆ. ಇಷ್ಟಾದರೂ ಕಿತಾಪತಿ ಬಿಡದ ಪಾಕಿಸ್ತಾನ ಮತ್ತೆ ಭಾರತದ ಜಮ್ಮುವಿನ ಮೇಲೆ ದಾಳಿಗೆ ವಿಫಲಯತ್ನ ನಡೆಸಿದೆ.
ಜಮ್ಮುವಿನಲ್ಲಿ ಇದುವರೆಗೆ ಪಾಕಿಸ್ತಾನದ 50ಕ್ಕೂ ಹೆಚ್ಚು ಡ್ರೋನ್ ದಾಳಿಯನ್ನು ಭಾರತೀಯ ವಿಫಲಗೊಳಿಸಿದೆ. ಭಾರತೀಯ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಹಾಗೂ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿತ್ತು. ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್ಕೋಟ್, ಅಮೃತಸರ, ಕಪುರ್ತಲ, ಜಲಂಧರ್, ಲುಧಿಯಾನ, ಆದಂಪುರ, ಬಟಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರಲೈ, ಭುಜ್ ಸೇರಿ ಒಟ್ಟು 15 ನಗರಗಳ ಮೇಲೂ ದಾಳಿಗೆ ಸಂಚುಮಾಡಿತ್ತು. ಆದರೆ ಭಾರತೀಯ ಸೇನೆ ಎಲ್ಲಾ ದಾಳಿಯನ್ನು ವಿಫಲಗೊಳಿಸಿದೆ.














