ಮನೆ ಕ್ರೀಡೆ ಸಿಎಸ್’ಕೆ ವಿರುದ್ಧ ಗೆದ್ದರೂ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಗೆ 12 ಲಕ್ಷ ರೂ. ದಂಡ

ಸಿಎಸ್’ಕೆ ವಿರುದ್ಧ ಗೆದ್ದರೂ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಗೆ 12 ಲಕ್ಷ ರೂ. ದಂಡ

0

ಬೆಂಗಳೂರು : ಐಪಿಎಲ್ 2023 ಟೂರ್ನಿಯ 17ನೇ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ಎದುರು ರಾಜಸ್ಥಾನ್ ರಾಯಲ್ಸ್ ತಂಡ ಅಂತಿಮ ಎಸೆತದಲ್ಲಿ 3 ರನ್ ಗಳ ರೋಚಕ ಜಯ ದಕ್ಕಿಸಿಕೊಂಡಿತು. ಈ ಪಂದ್ಯದಲ್ಲಿ ಸ್ಲೋ ಓವರ್ ರೇಟ್ ಪ್ರಮಾದ ಎಸೆಗಿದ ಕಾರಣ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಇದೀಗ ದಂಡ ತೆತ್ತಿದ್ದಾರೆ.

Join Our Whatsapp Group

ಸೂಪರ್ ಕಿಂಗ್ಸ್ ಎದುರು 3 ರನ್ ಗಳ ಜಯ ದಕ್ಕಿಸಿಕೊಂಡ ರಾಜಸ್ಥಾನ್ ರಾಯಲ್ಸ್ ತಂಡ ಇದೀಗ ಆಡಿದ 4 ಪಂದ್ಯಗಳಲ್ಲಿ 3 ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸಿಎಸ್ಕೆ ಎದುರು ಬೌಲಿಂಗ್ ವೇಳೆ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ 85 ನಿಮಿಷಗಳಲ್ಲಿ 20 ಓವರ್ಗಳನ್ನು ಎಸೆಯುವಲ್ಲಿ ವಿಫಲವಾಗಿತ್ತು. 85 ನಿಮಿಷಗಳ ಅಂತ್ಯಕ್ಕೆ ರಾಯಲ್ಸ್ ಇನ್ನು ಒಂದು ಓವರ್ ಎಸೆಯುವುದು ಬಾಕಿಯಿತ್ತು. ಹೀಗಾಗಿ ನಿಯಮಾನುಸಾರ ಆರ್.ಆರ್ ಕಪ್ತಾನ ಸಂಜು ಸ್ಯಾಮ್ಸನ್ ಗೆ 12 ಲಕ್ಷ ರೂ. ದಂಡ ಹೇರಲಾಗಿದೆ.

“ಈ ಬಾರಿಯ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಿಂದ ಆಗಿರುವ ಮೊದಲ ಪ್ರಮಾದ ಇದಾಗಿದೆ. ಐಸಿಸಿ ನೀತಿ ಸಂಹಿತೆಯ ಅನುಗುಣವಾಗಿ ಕನಿಷ್ಠ ದಂಡದ ರೂಪದಲ್ಲಿ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಅವರ ಮೇಲೆ 12 ಲಕ್ಷ ರೂ.ಗಳ ದಂಡ ಹೇರಲಾಗಿದೆ,” ಎಂದು ಐಪಿಎಲ್ ಆಡಳಿತ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅಂದಹಾಗೆ ಈ ಬಾರಿ ಸ್ಪೋ-ಓವರ್ ರೇಟ್ ಪ್ರಮಾದ ಕಾರಣ ದಂಡ ತೆತ್ತ ಮೊದಲ ಕ್ಯಾಪ್ಟನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು’ಪ್ಲೆಸಿಸ್ ಆಗಿದ್ದಾರೆ. ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ತಂಡ ಕೂಡ ನಿಗದಿತ ಸಮಯದ ಅಂತ್ಯಕ್ಕೆ 1 ಓವರ್ ಎಸೆಯುವುದು ಬಾಕಿಯಿತ್ತು. ಪಂದ್ಯದಲ್ಲಿ ಆರ್ಸಿಬಿ ತಂಡ ಎಲ್ ಎಸ್ ಜಿ ಎದುರು ಕೊನೇ ಎಸೆತದಲ್ಲಿ 1 ವಿಕೆಟ್ ಸೋಲುಂಡಿತ್ತು.

ಸಿಎಸ್’ಕೆ ಸವಾಲು ಗೆದ್ದ ರಾಯಲ್ಸ್

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಜೋಸ್ ಬಟ್ಲರ್ (52) ಬಾರಿಸಿದ ಅರ್ಧಶತಕ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಗಳ ಹೋರಾಟದ ಫಲವಾಗಿ 175/8 ರನ್ ಗಳ ಸವಾಲಿನ ಮೊತ್ತ ಪೇರಿಸಿತು. ಬಳಿಕ ಗುರಿ ಬೆನ್ನತ್ತಿದ ಸಿಎಸ್ ಕೆ, ಆರಂಭದಲ್ಲಿ ಋತುರಾಜ್ ಗಾಯಕ್ವಾಡ್ ವಿಕೆಟ್ ಕಳೆದುಕೊಂಡರೂ, ಡೆವೋನ್ ಕಾನ್ವೇ ಮತ್ತು ಅಜಿಂಕ್ಯ ರಹಾನೆ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಜಯದತ್ತ ದಾಪುಗಾಲಿಟ್ಟಿತ್ತು. ಆದರೆ, ಇನಿಂಗ್ಸ್ ಮಧ್ಯದಲ್ಲಿ ರಾಯಲ್ಸ್ ಸ್ಪಿನ್ನರ್ ಗಳ ಜಾಲಕ್ಕೆ ಸಿಕ್ಕು ಒದ್ದಾಟ ನಡೆಸಿದ ಸಿಎಸ್ ಕೆ ಬ್ಯಾಟರ್ಸ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು.

ಅಂತಿಮ 3 ಓವರ್ ಗಳಲ್ಲಿ ಎಂ.ಎಸ್ ಧೋನಿ (32*) ಮತ್ತು ರವೀಂದ್ರ ಜಡೇಜಾ (25) ಸಿಡಿದೆದ್ದರೂ ಕೊನೇ 3 ಎಸೆತಗಳಲ್ಲಿ 7 ರನ್ ಗಳಿಸಲಾಗದೆ ಸೋಲಿಗೆ ಶರಣಾಯಿತು. ರಾಯಲ್ಸ್ ಪರ ಅಂತಿಮ ಓವರ್ ಎಸೆದ ಸಂದೀಪ್ ಶರ್ಮಾ, ಮೊದಲ 3 ಎಸೆತಗಳಲ್ಲಿ 2 ಸಿಕ್ಸರ್ ಗಳನ್ನು ಹೊಡೆಸಿಕೊಂಡರೂ, ಅಂತಿಮ 3 ಎಸೆತಗಳಲ್ಲಿ ಯಾರ್ಕರ್ ಗಳ ಬಳಕೆ ಮಾಡಿ ಕೇವಲ 3 ರನ್ ಮಾತ್ರ ಕೊಟ್ಟು ಜಯದ ರೂವಾರಿ ಎನಿಸಿದರು. ಆಲ್ ರೌಂಡ್ ಆಟವಾಡಿದ ಆರ್. ಅಶ್ವಿನ್ ಪಂದ್ಯ ಶ್ರೇಷ್ಠ ಗೌರವ ಪಡೆದುಕೊಂಡರು.

ಹಿಂದಿನ ಲೇಖನಏ. 17 ರಂದು ಮೈಸೂರು ವಿಭಾಗ ಮಟ್ಟದ ಪಿಂಚಣಿ ಅದಾಲತ್
ಮುಂದಿನ ಲೇಖನಟಿ. ನರಸೀಪುರ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಕಾಲ್ನಡಿಗೆ ಜಾಥಾ, ಮಾನವ ಸರಪಳಿ ಮೂಲಕ ಮತದಾನ ಜಾಗೃತಿ