ಬೆಂಗಳೂರು : ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದ 137 ಮಂದಿಯನ್ನು ಈವರೆಗೆ ರಾಜ್ಯದಲ್ಲಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಕ್ರಮ ವಲಸಿಗರ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವ ಕುರಿತು ವಿವರಣೆ ನೀಡುವಂತೆ ಗಮನಸಳೆದಾಗ ಉತ್ತರ ನೀಡಿದ ಸಚಿವರು, 137 ಅಕ್ರಮ ವಲಸಿಗರ ಪೈಕಿ 25 ಮಂದಿ ಪಾಕಿಸ್ತಾನದವರಾಗಿದ್ದಾರೆ. ಬೆಂಗಳೂರಲ್ಲಿ 84, ಬೆಂಗಳೂರು ಗ್ರಾಮಾಂತರದಲ್ಲಿ 27, ಶಿವಮೊಗ್ಗದಲ್ಲಿ 12, ಹಾಸನದಲ್ಲಿ 3, ಉಡುಪಿಯಲ್ಲಿ 10 ಸೇರಿ 137 ಮಂದಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇನ್ನು, ಈ ವರ್ಷ 13 ಕಂಟ್ರಿ ಪಿಸ್ತೂಲ್ಗಳನ್ನು ಮತ್ತು 28 ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ. ಅಂತೆಯೇ 2024ರಲ್ಲಿ ಒಂದು ಕಂಟ್ರಿ ಪಿಸ್ತೂಲ್, ಒಂದು ಜೀವಂತ ಗುಂಡು, 2023ರಲ್ಲಿ 3 ಕಂಟ್ರಿ ಪಿಸ್ತೂಲ್, 3 ಜೀವಂತ ಗುಂಡುಗಳು ಮತ್ತು 2022ರಲ್ಲಿ 3 ಕಂಟ್ರಿ ಪಿಸ್ತೂಲ್, 6 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.
ವಿಜಯಪುರದಲ್ಲಿ ಭೂ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 27 ಪ್ರಕರಣಗಳು ದಾಖಲಾಗಿದ್ದು, 8 ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. 9 ಪ್ರಕರಣಗಳ ತನಿಖೆ ನಡೆಯುತ್ತಿದೆ. ಇದಲ್ಲದೇ, ಅಕ್ಕಿ ಮಾಫಿಯಾ ಸಹ ನಡೆಯುತ್ತಿದ್ದು, ಇದರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಈ ನಡುವೆ, ವಿಜಯಪುರದಲ್ಲಿ ಎನ್ಐಎ ಕಚೇರಿ ಸ್ಥಾಪನೆ ವಿಚಾರವು ಕೇಂದ್ರ ಸರ್ಕಾರ ಗಮನಹರಿಸಬೇಕು. ರಾಜ್ಯ ಸರ್ಕಾರವು ಶಿಫಾರಸ್ಸು ಮಾಡಲು ಬರುವುದಿಲ್ಲ ಎಂದು ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದರು.














