ಮನೆ ರಾಜ್ಯ ಕರ್ನಾಟಕಕ್ಕೆ ₹15,441 ಕೋಟಿ ಬಂಡವಾಳ ಹೂಡಿಕೆ! 5,277 ಉದ್ಯೋಗಾವಕಾಶ ಸೃಷ್ಟಿ: ಸಿಎಂ ಸಿದ್ದರಾಮಯ್ಯ

ಕರ್ನಾಟಕಕ್ಕೆ ₹15,441 ಕೋಟಿ ಬಂಡವಾಳ ಹೂಡಿಕೆ! 5,277 ಉದ್ಯೋಗಾವಕಾಶ ಸೃಷ್ಟಿ: ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ರಾಜ್ಯದಲ್ಲಿ ಉದ್ಯೋಗ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಹೊಸ ಶಕ್ತಿ ತುಂಬಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ₹15,441.17 ಕೋಟಿ ಮೊತ್ತದ ಹೂಡಿಕೆಯ 6 ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳ ಅನುಷ್ಠಾನದಿಂದ 5,277 ಉದ್ಯೋಗಗಳು ಸೃಷ್ಟಿಯಾಗಲಿದ್ದು, ರಾಜ್ಯದ ಕೈಗಾರಿಕಾ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ಈ ಬಂಡವಾಳ ಹೂಡಿಕೆಯಿಂದ ರಾಜ್ಯದಲ್ಲಿ ಹಲವು ಪ್ರಮುಖ ಕೈಗಾರಿಕೆಗಳು ಸ್ಥಾಪನೆಗೊಳ್ಳಲಿವೆ. ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಒಟ್ಟು ₹13,921 ಕೋಟಿ ಹೂಡಿಕೆಯ ಹೊಸ ಯೋಜನೆಗಳಿಗೆ ಹಾಗೂ ₹1,520.17 ಕೋಟಿ ಮೊತ್ತದ ಹೆಚ್ಚುವರಿ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಮೂಲಕ ಒಟ್ಟಾರೆ 5,277 ಉದ್ಯೋಗಗಳ ಆವಕಾಶವನ್ನು ಸರ್ಕಾರ ಕಲ್ಪಿಸಿಕೊಡಲಿದೆ.

ಯಾವ ಸಂಸ್ಥೆ – ಎಷ್ಟು ಹೂಡಿಕೆ – ಎಷ್ಟು ಉದ್ಯೋಗ?

  • ಶ್ರೀ ಸಿಮೆಂಟ್ ಲಿಮಿಟೆಡ್: ₹2,406 ಕೋಟಿ ಹೂಡಿಕೆ, 300 ಉದ್ಯೋಗ
  • ದಾಲ್ಮಿಯಾ ಸಿಮೆಂಟ್ (ಭಾರತ್) ಲಿ.: ₹3,000 ಕೋಟಿ ಹೂಡಿಕೆ, 570 ಉದ್ಯೋಗ
  • ದಾಲ್ಮಿಯಾ (ಭಾರತ್) ಲಿ.: ₹3,020 ಕೋಟಿ ಹೂಡಿಕೆ, 570 ಉದ್ಯೋಗ
  • ಎಂವೀ ಎನರ್ಜಿ ಪ್ರೈ. ಲಿ.: ₹5,495 ಕೋಟಿ ಹೂಡಿಕೆ, 2,508 ಉದ್ಯೋಗ
  • ಕಲರ್‌ಟೋನ್ ಟೆಕ್ಸ್‌ಟೈಲ್ಸ್ ಪ್ರೈ. ಲಿ.: ₹190.17 ಕೋಟಿ ಹೂಡಿಕೆ, 129 ಉದ್ಯೋಗ
  • ಬಾಷ್ ಅಟೊಮೋಟಿವ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈ. ಲಿ.: ₹1,330 ಕೋಟಿ ಹೂಡಿಕೆ, 1,200 ಉದ್ಯೋಗ

ಇದಲ್ಲದೆ, ಕೆಲ ತಿದ್ದುಪಡಿ ಯೋಜನೆಗಳಿಗೆ ಸಮಯ ವಿಸ್ತರಣೆ ಹಾಗೂ ಹೆಚ್ಚುವರಿ ಭೂಮಿ ಹಂಚಿಕೆಗೂ ಸಮಿತಿ ಅನುಮೋದನೆ ನೀಡಿದೆ. ಪ್ರಮುಖ ಯೋಜನೆಗಳು ಈ ಕೆಳಗಿನಂತಿವೆ:

  • ಜೆಎಸ್‌ಡಬ್ಲ್ಯು ನಿಯೊ ಎನರ್ಜಿ ಲಿಮಿಟೆಡ್: 300 ಮೆಗಾವಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆ
  • ಎಕ್ಸೈಡ್ ಇಂಡಸ್ಟ್ರೀಸ್ ಲಿಮಿಟೆಡ್: ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಹಂತ-2 ರಲ್ಲಿ 20 ಎಕರೆ ಭೂಮಿ
  • ಎಸ್‌ಎಲ್‌ಆರ್ ಮೆಟಾಲಿಕ್ಸ್ ಲಿಮಿಟೆಡ್: 2027-28 ರವರೆಗೆ 2 ಹಂತಗಳಲ್ಲಿ ಯೋಜನೆ
  • ರಸಶ್ರೀ ಟೆಕ್ ಪಾರ್ಕ್: ಇಂಟಿಗ್ರೇಟೆಡ್ ಟೌನ್‌ಶಿಪ್ ಸ್ಥಾಪನೆ
  • ವನ್ಯಾ ಸ್ಟೀಲ್ಸ್ ಪ್ರೈ. ಲಿ.: ಮೃದು ಕಬ್ಬಿಣ, ರೋಲಿಂಗ್ ಮಿಲ್ ಮತ್ತು ವಿದ್ಯುತ್ ಉತ್ಪಾದನೆ
  • ಇಂಡಿಯನ್ ಕೇನ್ ಪವರ್ ಲಿಮಿಟೆಡ್: ಸಕ್ಕರೆ ಕಾರ್ಖಾನೆ ಹಾಗೂ 70 ಮೆಗಾವಾಟ್ ವಿದ್ಯುತ್ ಘಟಕ
  • ಖಯಾತಿ ಪೈಪ್ಸ್ ಅಂಡ್ ಪವರ್: ಸಮಗ್ರ ಉಕ್ಕು ಘಟಕ
  • ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್: ಲೈಮ್‌ಸ್ಟೋನ್ ಘಟಕ
  • ಯುಫ್ಲೆಕ್ಸ್ ಲಿಮಿಟೆಡ್: ಪಾಲಿಯೆಸ್ಟರ್ ಫಿಲ್ಮ್ ತಯಾರಿಕಾ ಘಟಕ

ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಇಂಧನ ಸಚಿವ ಕೆ.ಜೆ. ಜಾರ್ಜ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪಿ.ಎಂ. ನರೇಂದ್ರಸ್ವಾಮಿ (ಪಿಸಿಬಿ ಅಧ್ಯಕ್ಷರು), ಎಲ್.ಕೆ. ಅತೀಕ್, ಸೆಲ್ವಕುಮಾರ್, ರಿತೇಶ್ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.