ಬೆಂಗಳೂರು : 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜ.29 ರಿಂದ ಫೆ.6ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು, ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಉದ್ಘಾಟನೆಯಾಗಲಿದೆ. ನಾನೇ ಉದ್ಘಾಟನೆ ಮಾಡ್ತೀನಿ. ಈ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸಮಿತಿ ನಿರ್ಧರಿಸಿದಂತೆ ಪ್ರಕಾಶ್ ರಾಜ್ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಚಲನಚಿತ್ರೋತ್ಸವದಲ್ಲಿ 60 ದೇಶಗಳ 200 ಚಲನಚಿತ್ರಗಳು ಪ್ರದರ್ಶನ ಆಗಲಿದೆ. 400 ಪ್ರದರ್ಶನಗಳು ಇರಲಿವೆ. ಈ ವರ್ಷ ಆಸ್ಕರ್ ಪ್ರಶಸ್ತಿಗಳಿಗೆ ಶಾರ್ಟ್ ಲಿಸ್ಟ್ ಆಗಿರೋ ಚಿತ್ರಗಳು ಪ್ರದರ್ಶನ ಆಗಲಿವೆ.
ಜೊತೆಗೆ ಇತ್ತೀಚಿಗೆ ಅಗಲಿದ ನಟ ಧರ್ಮೇಂದ್ರ, ಸರೋಜಾದೇವಿ, ಉಮೇಶ್, ಶಾಜಿ ಎನ್ ಕರುಣ್, ರಘು, ಇನ್ನಿತರ ಗಣ್ಯರ ಸ್ಮರಣಾರ್ಥ ಶ್ರದ್ಧಾಂಜಲಿ ಮತ್ತು ಸವಿನೆನಪು ವಿಭಾಗದಲ್ಲಿ ಚಲನಚಿತ್ರ ಪ್ರದರ್ಶಿಸಲಾಗುತ್ತದೆ. ಮಹಿಳೆಯರ ಸಬಲೀಕರಣದ ಥೀಮ್ ಮಾಡುವ ಯೋಚನೆ ಇದೆ. ಸಂಜೆ ಒಳಗೆ ಥೀಮ್ ಬಿಡುಗಡೆ ಮಾಡ್ತೀವಿ. ಈ ಎಲ್ಲಾ ಸಿನಿಮಾಗಳನ್ನು ಒಂದೇ ಕಡೆ ನೋಡಲು ಈ ಉತ್ಸವ ಅನುಕೂಲ ಮಾಡಿಕೊಡುತ್ತದೆ. ಲೂಲು ಮಾಲ್ನಲ್ಲಿರುವ ಸಿನಿ ಪೊಲಿಸ್ನ 11 ಸ್ಕ್ರೀನ್ನಲ್ಲಿ ಪ್ರದರ್ಶನ ಮಾಡಲಾಗುವುದು. ಈವರೆಗೂ 110 ಚಿತ್ರಗಳಿಂದ ಅರ್ಜಿ ಬಂದಿದ್ದು, ಡಿಸೆಂಬರ್ 31 ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವಾಗಿದೆ ಎಂದಿದ್ದಾರೆ.
ಇದೇ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಟ ನಿರಾಕರಣೆ ವಿಚಾರವಾಗಿ ಮಾತನಾಡಿ, ಗೃಹ ಸಚಿವರು ಸಮಿತಿ ರಚನೆ ಮಾಡಿದ್ದಾರೆ. ಅದರ ಬಗ್ಗೆ ನಿರ್ಧಾರ ಮಾಡ್ತಾರೆ. ನ್ಯಾ.ಕುನ್ಹಾ ವರದಿ ಶಿಫಾರಸುಗಳನ್ನ ಜಾರಿ ಮಾಡಬೇಕು. ಗೃಹ ಸಚಿವರು ಈ ಬಗ್ಗೆ ಮಾತಾಡ್ತಾರೆ ಎಂದು ತಿಳಿಸಿದ್ದಾರೆ. ಈ ವೇಳೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲಾ, ಹಿರಿಯ ನಟಿ ಜಯಮಾಲ, ಸಾರಾ ಗೋವಿಂದ್ ಸೇರಿದಂತೆ ಚಿತ್ರೋದ್ಯಮದ ಪ್ರಮುಖರು ಭಾಗಿಯಾಗಿದ್ದರು.















