ಮನೆ ಕಾನೂನು ಲಂಚ ಪಡೆದ ಜಿಎಸ್​ ಟಿ ಅಧಿಕಾರಿಗೆ 3 ವರ್ಷ ಜೈಲು, 5 ಲಕ್ಷ ರೂ. ದಂಡ...

ಲಂಚ ಪಡೆದ ಜಿಎಸ್​ ಟಿ ಅಧಿಕಾರಿಗೆ 3 ವರ್ಷ ಜೈಲು, 5 ಲಕ್ಷ ರೂ. ದಂಡ ವಿಧಿಸಿದ ಸಿಬಿಐ ವಿಶೇಷ ನ್ಯಾಯಾಲಯ

0

ಬೆಂಗಳೂರು: ಲಂಚ ಪಡೆದ ಪ್ರಕರಣದಲ್ಲಿ ಜಿಎಸ್‌ಟಿ ಅಧಿಕಾರಿಯೊಬ್ಬರಿಗೆ ಸಿಬಿಐ ವಿಶೇಷ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿ ದಂಡ ವಿಧಿಸಿದೆ.

Join Our Whatsapp Group

ಉತ್ತರ ಪ್ರದೇಶ ಮೂಲದ ಕೇಂದ್ರೀಯ ಅಬಕಾರಿ ಮತ್ತು ಕೇಂದ್ರ ತೆರಿಗೆ ಸೂಪರಿಂಟೆಂಡೆಂಟ್ ಜಿತೇಂದ್ರ ಕುಮಾರ್ ಡಾಗೂರ್, ತೆರಿಗೆ ವಿಚಾರದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ನೆರವಾಗಲು ಮುಂದಾದ ಮತ್ತು ದಂಡ ಮನ್ನಾ ಮಾಡಲು 25,000 ರೂ.ಗಳ ಲಂಚ ಪಡೆದ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿತ್ತು. ಹೀಗಾಗಿ ಶಿಕ್ಷೆ ವಿಧಿಸಲಾಗಿದೆ.

ತನಿಖೆ ಮತ್ತು ವಿಚಾರಣೆ ನಡೆಸಲು ತೆರಿಗೆದಾರರ ಹಣದಿಂದ ಸಾಕಷ್ಟು ಖರ್ಚು ಮಾಡಲಾಗಿದೆ. ಹೀಗಾಗಿ ಆರೋಪಿಗೆ 5 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ ಎಂದು ಭಾರಿ ಮೊತ್ತದ ದಂಡ ವಿಧಿಸಿದ್ದಕ್ಕೆ ನ್ಯಾಯಾಲಯ ಕಾರಣ ನೀಡಿದೆ.

ಡಾಗೂರ್ ಅವರು ದೇಶದ ಹಿತದೃಷ್ಟಿಯಿಂದ ಪ್ರಾಮಾಣಿಕವಾಗಿ ಮತ್ತು ಶ್ರದ್ಧೆಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿತ್ತು. ಆದರೆ ಅಂತಹ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡರೆ, ತೆರಿಗೆದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇಂಥ ಕೃತ್ಯಗಳಿಂದ ದೇಶದ ಆರ್ಥಿಕ ಸ್ಥಿತಿ ಕೂಡ ಹಾಳಾಗುತ್ತದೆ ಎಂದು ನ್ಯಾಯಮೂರ್ತಿ ಎಚ್‌ಎ ಮೋಹನ್‌ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಡಾಗೂರ್ 2021 ರ ಮಾರ್ಚ್‌ನಲ್ಲಿ ದೂರುದಾರ ಜಗದೀಶ್ ಸುಬ್ರಾಯ್ ಭಾವೆ ಅವರಿಂದ ಉತ್ತರ ಕನ್ನಡ ವಿಭಾಗದ ಹೊನ್ನಾವರ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ 25,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಸಿಬಿಐ ಬಲೆಗೆ ಬಿದ್ದಿದ್ದರು. ಡಾಗೂರ್ ಒಟ್ಟು 50,000 ರೂ.ಗಳನ್ನು ಎರಡು ಕಂತುಗಳಲ್ಲಿ ನೀಡಲು ಸೂಚಿಸಿದ್ದರು.

ದೂರುದಾರರು ತಮ್ಮ ಮೊಬೈಲ್ ಫೋನ್‌ನಲ್ಲಿ ಆಡಿಯೋ ಮತ್ತು ವಿಡಿಯೋ ಮೋಡ್‌ನಲ್ಲಿ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ದೂರು ಸಲ್ಲಿಸಿದ್ದರು. ನಂತರ ಅಧಿಕಾರಿಗಳು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಲೆ ಬೀಸಿದ್ದರು.

ಹಿಂದಿನ ಲೇಖನಎಸ್ ​ಬಿಐನಿಂದ 12,000 ಹುದ್ದೆಗಳ ನೇಮಕಾತಿ
ಮುಂದಿನ ಲೇಖನಎರಡು ವಾಹನಗಳ ನಡುವೆ ಡಿಕ್ಕಿ: 6 ಮಂದಿ ಸಾವು, 7 ಮಂದಿಗೆ ಗಾಯ