ಬೆಂಗಳೂರು : ನಗರದ ಹೊರವಲಯದಲ್ಲಿ ದರೋಡೆಕೋರರ ಹಾವಳಿ ಹೆಚ್ಚಾಗಿದ್ದು, ಮೂರೇ ಬರೋಬ್ಬರಿ 37 ದರೋಡೆ ಪ್ರಕರಣಗಳು ನಡೆದಿವೆ. ಪೊಲೀಸರು ರಾತ್ರಿ ಪೂರ್ತಿ ನಿದ್ರೆ ಬಿಟ್ಟು 6 ಜನ ಅಪ್ರಾಪ್ತರ ಗ್ಯಾಂಗ್ನ್ನು ಪೊಲೀಸರು ಬಂಧಿಸಿದ್ದಾರೆ.
ಮಾದನಾಯಕನಹಳ್ಳಿ, ದೊಡ್ಡಬಳ್ಳಾಪುರ, ಸೂರ್ಯನಗರ, ನೆಲಮಂಗಲ ಹಾಗೂ ಬ್ಯಾಡರಹಳ್ಳಿ ಭಾಗದಲ್ಲಿ ದರೋಡೆ ಪ್ರಕರಣಗಳು ನಡೆದಿದ್ದವು. ಈ ಗ್ಯಾಂಗ್ ಹಣ ಕೊಟ್ರೆ ಸುಮ್ಮನಾಗುತ್ತಿತ್ತು. ಹಣ ಕೊಡದಿದ್ದರೆ ಚಾಕು ಹಾಕಿ ಪರಾರಿಯಾಗುತ್ತಿದ್ದರು.
ಈ ಅಪ್ರಾಪ್ತ ಆರೋಪಿಗಳು ರಾತ್ರಿ ಹೊತ್ತು ಮೂರು ಬೈಕ್ನಲ್ಲಿ ಸುತ್ತಾಡುತ್ತಿದ್ದರು. ಮೊದಲ ದಿನ ದೊಡ್ಡಬಳ್ಳಾಪುರ ಸುತ್ತಮುತ್ತ ದರೋಡೆ ಮಾಡಿ, ಎರಡನೇ ದಿನ ಮಾದನಾಯಕನಹಳ್ಳಿ, ನೆಲಮಂಗಲ ಭಾಗದಲ್ಲಿ ದರೋಡೆ ಮಾಡಿದ್ದರು. ಮೂರನೇ ದಿನ ಸೂರ್ಯನಗರ ಸುತ್ತಮುತ್ತ ದರೋಡೆ ಮಾಡಿದ್ದರು. ಹೀಗೆ ಬರೋಬ್ಬರಿ ಮೂರು ದಿನದಲ್ಲಿ 37 ಕಡೆ ಅಪ್ರಾಪ್ತರ ಗ್ಯಾಂಗ್ ದರೋಡೆ ಮಾಡಿತ್ತು.
ಆರೋಪಿಗಳು ಬೈಕ್, ಕಾರು ಹಾಗೂ ಲಾರಿಗಳನ್ನು ಅಡ್ಡ ಹಾಕಿ, ಚಾಕು ತೋರಿಸಿ ಮೊಬೈಲ್, ಹಣ ಕೊಡುವಂತೆ ಬೆದರಿಕೆ ಹಾಕುತ್ತಿದ್ದರು. ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಗ್ಯಾಂಗ್ ಒಬ್ಬರಿಗೆ ಚಾಕು ಇರಿದಿತ್ತು.
ಸಿಸಿ ಟಿವಿ ಪರಿಶೀಲನೆ ವೇಳೆ ಒಂದೇ ತಂಡ ಈ ಕೃತ್ಯ ಎಸಗಿರುವುದು ಗೊತ್ತಾಗಿತ್ತು. ಇದೇ ಆಧಾರದ ಮೇಲೆ ಗ್ರಾಮಾಂತರ ಪೊಲೀಸರು ವಿಶೇಷ ತಂಡ ರಚಿಸಿದ್ದರು. ರಾತ್ರಿಯಿಡೀ ಪೊಲೀಸರು ಗಸ್ತು ತಿರುಗುತ್ತಿದ್ದಿದ್ದರಿಂದ ಗ್ಯಾಂಗ್ ನಗರಕ್ಕೆ ಎಂಟ್ರಿ ಕೊಟ್ಟಿದ್ದರು. ತಪಾಸಣೆ ವೇಳೆ ಬ್ಯಾಡರಹಳ್ಳಿ ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಎಲ್ಲಾ ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಗ್ಯಾಂಗ್ನಿಂದ 9 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಓರ್ವನಿಗೆ ಅಪರಾಧದ ಹಿನ್ನೆಲೆ ಇರುವುದು ಗೊತ್ತಾಗಿದೆ.














