ಬೆಂಗಳೂರು: ಬೆಂಗಳೂರು ಮತ್ತು ಕೋಲಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಯೊಂದು ೪೪.೮೩ ಕೋಟಿಯಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಂಚಿಸಿರುವುದನ್ನು ಪತ್ತೆ ಮಾಡಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಉದ್ಯಮಿ ಒಬ್ಬರನ್ನು ಬಂಧಿಸಿದ್ದಾರೆ.
ಕೋಲಾರದಲ್ಲಿ ಕಾರ್ಖಾನೆ ಮತ್ತು ಬೆಂಗಳೂರಿನಲ್ಲಿ ಕಚೇರಿ ಹೊಂದಿರುವ ಲಾರಾಗಾ ಮೆಟಲ್ಸ್ ಪ್ರೈವೇಟ್ ಲಿಮಿಟೆಡ್ ನಕಲಿ ಇನ್ವಾಯ್ಸ್ಗಳು ಮತ್ತು ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ, ಹೂಡುವಳಿ ತೆರಿಗೆ ಜಮೆ (ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್) ಅನ್ನು ಕ್ಲೇಮು ಮಾಡಿದೆ. ಕಂಪನಿಯ ಕಚೇರಿ ಮೇಲೆ ಈಚೆಗೆ ದಾಳಿ ನಡೆಸಿ, ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಈ ವಂಚನೆ ಪತ್ತೆಯಾಗಿದೆ ಎಂದು ತೆರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಂಪನಿಯ ಪ್ರವರ್ತಕರಾದ ಘನಶ್ಯಾಮ್ ಅಗರ್ವಾಲ್ ಮತ್ತು ಮುಕುಂದ್ ಅಗರ್ವಾಲ್ ಅವರು ತೆರಿಗೆ ವಂಚನೆಯಲ್ಲಿ ಭಾಗಿಯಾಗಿದ್ದಾರೆ. ಕಂಪನಿಯು ಈಚಿನ ತ್ರೈಮಾಸಿಕದಲ್ಲಿ ೨೫೦ ಕೋಟಿ ಮೊತ್ತದ ವಹಿವಾಟು ನಡೆಸಿದೆ. ಆದರೆ ಇದರಲ್ಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಹೆಸರಿನಲ್ಲಿ ೪೪.೩೮ ಕೋಟಿ ವಂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಮುಕುಂದ್ ಅಗರ್ವಾಲ್ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಯಿತು. ಕಂಪನಿಯ ಸರಕು ಮತ್ತು ಸೇವೆ ಪಡೆದುಕೊಂಡ ಗ್ರಾಹಕರ ಹೆಸರಿನ ಬದಲಿಗೆ, ಪೂರೈಕೆದಾರರ ಹೆಸರಿನಲ್ಲೇ ನಕಲಿ ಇನ್ವಾಯ್ಸ್ ಸೃಷ್ಟಿಸಲಾಗುತ್ತಿತ್ತು. ಜತೆಗೆ ಬ್ಯಾಂಕ್ ಖಾತೆಗಳನ್ನೂ ತೆರೆದು, ಅದಕ್ಕೆ ಹಣ ಪಾವತಿ ಮಾಡಲಾಗುತ್ತಿತ್ತು. ಆ ಹಣವನ್ನು ಆರೋಪಿ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದರು. ಆದರೆ ಈ ವಹಿವಾಟನ್ನು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅಡಿ ತೋರಿಸಿ, ತೆರಿಗೆ ವಂಚಿಸುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಆರೋಪಿಯನ್ನು ಆರ್ಥಿಕ ಅಪರಾಧಗಳ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಮುಕುಂದ್ ಅವರನ್ನು ಏಪ್ರಿಲ್ ೯ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.