ಮನೆ ಸುದ್ದಿ ಜಾಲ 67ನೇ ರೈಲ್ವೆ ಸಾಪ್ತಾಹಿಕ ಪ್ರಶಸ್ತಿ ಪ್ರದಾನ

67ನೇ ರೈಲ್ವೆ ಸಾಪ್ತಾಹಿಕ ಪ್ರಶಸ್ತಿ ಪ್ರದಾನ

0

ಮೈಸೂರು (Mysuru)- ನೈಋತ್ಯ ರೈಲ್ವೆ ಮೈಸೂರು ವಿಭಾಗವು 67ನೇ ರೈಲ್ವೆ ಸಾಪ್ತಾಹಿಕ ಪ್ರಶಸ್ತಿ ಕಾರ್ಯಕ್ರಮಯನ್ನು ಇಂದು ರೈಲ್ವೆ ಕಲ್ಯಾಣ ಮಂಟಪದಲ್ಲಿ ಆಚರಿಸಿತು.

ವಿಭಾಗೀಯ ರೈಲ್ವೇ ವ್ಯವಸ್ಥಾಪಕರಾದ ರಾಹುಲ್ ಅಗರ್ವಾಲ್ ಅವರು, ತಮ್ಮ ಕೆಲಸದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಸಿಬ್ಬಂದಿಗಳಿಗೆ ಪ್ರಶಸ್ತಿಗಳನ್ನು ನೀಡಿದರು. 2021-2022 ರ ಆರ್ಥಿಕ ವರ್ಷದಲ್ಲಿ ಪ್ರಶಂಸನೀಯ ಕಾರ್ಯಕ್ಷಮತೆಗಾಗಿ 86 ಸಿಬ್ಬಂದಿಗಳು ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು ಮತ್ತು ಅವುಗಳೊಂದಿಗೆ 10 ಸಮೂಹ ಪ್ರಶಸ್ತಿಗಳನ್ನು ಸಹ ನೀಡಲಾಯಿತು.

ಬಾಣಸಂದ್ರ ರೈಲ್ವೆ ನಿಲ್ದಾಣವು ಮೈಸೂರು ವಿಭಾಗದಲ್ಲಿ ಉತ್ತಮವಾಗಿ ನಿರ್ವಹಿಸಲ್ಪಟ್ಟ ರೈಲು ನಿಲ್ದಾಣ ಪ್ರಶಸ್ತಿಯನ್ನು, ಮೈಸೂರಿನ ಚಾಲನ ಸಿಬ್ಬಂದಿಗಳ ವಿಶ್ರಾಂತಿಗೃಹಕ್ಕೆ ಅತ್ಯುತ್ತಮವಾಗಿ ನಿರ್ವಹಿಸಲಾದ ‘ರನ್ನಿಂಗ್ ರೂಮ್’ ಪ್ರಶಸ್ತಿ, ಮೈಸೂರಿನ ಸಿಬ್ಬಂದಿ ಶಾಖೆಯ ಕಚೇರಿ  ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟ ಕಚೇರಿ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿತು.

ಮೈಸೂರು ವಿಭಾಗದ 6 ಅಧಿಕಾರಿಗಳು ಮತ್ತು 34 ಉದ್ಯೋಗಿಗಳನ್ನು 18 ಮೇ 2022 ರಂದು ನಡೆದ ರೈಲ್ವೆ ಸಪ್ತಾಹದ ಆಚರಣೆಯ ಸಂದರ್ಭದಲ್ಲಿ ವಲಯ ಮಟ್ಟದಲ್ಲಿ ನಮ್ಮ ಪ್ರಧಾನ ವ್ಯವಸ್ಥಾಪಕರು ಅವರ ಶ್ಲಾಘನೀಯ ಸೇವೆಯನ್ನು ಗುರುತಿಸಿ ಪುರಸ್ಕರಿಸಿದ್ದಾರೆ.

ರಾಹುಲ್ ಅಗರ್ವಾಲ್ ಅವರು 2021-22ನೇ ವರ್ಷದಲ್ಲಿ ವಿಭಾಗದ ಕಾರ್ಯವೈಖರಿ ಕುರಿತು ಮಾಹಿತಿ ನೀಡುತ್ತಾ, ವಿಭಾಗವು 2021-22ನೇ ವರ್ಷದ ಒಟ್ಟಾರೆ ದಕ್ಷತೆಯ ಫಲಕವನ್ನು ಗೆದ್ದುಕೊಂಡಿದೆ. ಇದರ ಹೊರತಾಗಿ ವಿಭಾಗದ ವಿತ್ತ ಇಲಾಖೆ, ವಿದ್ಯುತ್,  ವೈದ್ಯಕೀಯ ಮತ್ತು ಕಾರ್ಯನಿರ್ವಹಣಾ ಇಲಾಖೆಗಳು ಸಹ ನೈಋತ್ಯ ರೈಲ್ವೆಯ ವಲಯ ಮಟ್ಟದಲ್ಲಿ ದಕ್ಷತಾ ಫಲಕಗಳನ್ನು ಪಡೆದಿವೆ. ಹಾಗೆಯೇ, ಹುಬ್ಬಳ್ಳಿಯಲ್ಲಿ ನಡೆದ 67ನೇ ರೈಲ್ವೆ ಸಪ್ತಾಹ ಪ್ರಶಸ್ತಿಯ ಸಂದರ್ಭದಲ್ಲಿ ಅತ್ಯುತ್ತಮ ನಿರ್ವಹಣೆಯ ನಿಲ್ದಾಣವಾಗಿ (ಮೇಜರ್) ದಾವಣಗೆರೆ ರೈಲ್ವೆ ನಿಲ್ದಾಣ ಆಯ್ಕೆಯಾಗಿದೆ. ಈ ಸಾಧನೆಗಾಗಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿದರು.

2021-22 ರ ಕಾರ್ಯನಿರ್ವಹಣೆ:

• ವಿಭಾಗವು ಒಟ್ಟಾರೆ 9.14 ದಶಲಕ್ಷ ಟನ್‌ಗಳ ಸರಕು ಸಾಗಣೆಯನ್ನು ಸಾಧಿಸಿ. (ಕಳೆದ ವರ್ಷ 6.91 ದಶಲಕ್ಷ  ಟನ್) ಶೇ.32.20 ಪ್ರಗತಿ ಸಾಧಿಸಿದೆ.

• ವಿಭಾಗದ ಮೂಲ ಆದಾಯವು ಕಳೆದ ವರ್ಷಕ್ಕಿಂತ ಶೇ.20.26 ರಷ್ಟು ಏರಿಕೆಯಾಗಿ 930.01 ಕೋಟಿ ರೂ. ತಲುಪಿದೆ.

• ರೈಲು ಗಾಡಿಗಳ ಸಮಯಪ್ರಜ್ಞೆ – ಮೇಲ್ / ಎಕ್ಸ್‌ಪ್ರೆಸ್ ಶೇ.99.17.

• ವಿಭಾಗವು 14.04 ದಶಲಕ್ಷ  ಪ್ರಯಾಣಿಕರನ್ನು ಸಾಗಿಸಿದೆ.

• ವಿಭಾಗವು 9.12 ದಶಲಕ್ಷ  ಯೂನಿಟ್ ಇಂಧನವನ್ನು ಉಳಿಸಿದೆ, ಇದು 80 ಕೋಟಿ ರೂ.ಗಳ ಉಳಿತಾಯಕ್ಕೆ ಕಾರಣವಾಯಿತು.

• ಮೈಸೂರು ವಿಭಾಗದ ಐದು ಚಲನಾ ಸಿಬ್ಬಂದಿ ಕೊಠಡಿಗಳು ಈಗ ISO 9001:2015 ಪ್ರಮಾಣೀಕರಿಸಲ್ಪಟ್ಟಿವೆ.

• ಹಾಸನ, ಅರಸೀಕೆರೆ, ಬೀರೂರು ಮತ್ತು ಕಡೂರಿ ನಿಲ್ದಾಣಗಳಲ್ಲಿ ಪ್ರಯಾಣಿಕರ ಲಿಫ್ಟ್‌ ಗಳನ್ನು ಕಾರ್ಯಾರಂಭಗೊಳಿಸಲಾಯಿತು.

• ನೈಋತ್ಯ ರೈಲ್ವೆಯಲ್ಲಿ ಮೈಸೂರು ವಿಭಾಗವು ಏಕೀಕೃತ ಬ್ಯಾಲೆನ್ಸ್ ಶೀಟ್ ಮಾಡ್ಯೂಲ್ ಅಳವಡಿಸಲಾಗಿದೆ ಮತ್ತು ಶೇ.100% ಕೋಚಿಂಗ್ ಬ್ಯಾಲೆನ್ಸ್ ಶೀಟ್ ಅನ್ನು ಅಳವಡಿಸಿದ ಮೊದಲ ವಿಭಾಗವಾಗಿದೆ.

• ಭಾರತೀಯ ರೈಲ್ವೆಯಲ್ಲಿಯೇ, ಮೈಸೂರು ವಿಭಾಗವು  ಸೇವೆ ಸಲ್ಲಿಸುತ್ತಿರುವ ಶೇ.100 ರಷ್ಟು ಉದ್ಯೋಗಿಗಳಿಗೆ ವಿಶಿಷ್ಟ ವೈದ್ಯಕೀಯ ಗುರುತಿನ ಚೀಟಿ ನೋಂದಣಿ ಮತ್ತು ಕಾರ್ಡ್‌ಗಳ ಉತ್ಪಾದನೆಯನ್ನು ಪೂರ್ಣಗೊಳಿಸಿದ ಮೊದಲ ವಿಭಾಗವಾಗಿದೆ.

• ಪ್ರಯಾಣಿಕರಿಗೆ ಉತ್ತಮ ಸೇವೆಗಳನ್ನು ಒದಗಿಸುವುದಕ್ಕಾಗಿ ವಿಭಾಗದಿಂದ ಹೊರಡುವ ವಿವಿಧ ರೈಲುಗಳಲ್ಲಿ ಹೆಚ್ಚುವರಿಯಾಗಿ 28 ಕೋಚ್‌ಗಳನ್ನು ಶಾಶ್ವತವಾಗಿ ಸೇರಿಸಲಾಗಿದೆ ಮತ್ತು 384 ಕೋಚ್‌ಗಳನ್ನು ತಾತ್ಕಾಲಿಕವಾಗಿ ಒದಗಿಸಲಾಗಿದೆ.

• ಪರಿಸರಕ್ಕೆ ಅನುಕೂಲದ ಉಪಕ್ರಮದ ಮೇಲೆ, ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಮೈಸೂರಿನಲ್ಲಿ ಕಾರ್ಯಾರಂಭ ಮಾಡುವುದರ ಜೊತೆಗೆ ಸ್ವಚ್ಛ ಭಾರತ, ಪ್ಲಾಸ್ಟಿಕ್ ನಿಷೇಧ ಮತ್ತು ನೀರಿನ ಸಂರಕ್ಷಣೆ ಕುರಿತು ಹಲವಾರು ಜಾಥಾಗಳನ್ನು ನಡೆಸಲಾಗಿದೆ. ಹಸಿರೀಕರಣಕ್ಕಾಗಿ ಮಾಡುವ ನಿರಂತರ ಪ್ರಯತ್ನದಲ್ಲಿ ವಿಭಾಗದಲ್ಲಿ ಸುಮಾರು 3000 ಮರಗಳನ್ನು ನೆಡಲಾಗಿದೆ.

ಕಾರ್ಯಕ್ರಮದಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ದೇವಸಹಾಯಂ, ಬುಡತಿ ಶ್ರೀನಿವಾಸುಲು, ಮೈಸೂರು ವಿಭಾಗದ ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಪ್ರಶಾಂತ್ ಮಾಸ್ತಿಹೊಳಿ ಮತ್ತಿತರರು ಉಪಸ್ಥಿತರಿದ್ದರು.

ಹಿಂದಿನ ಲೇಖನನಿರ್ವಹಣಾ ಕಾಮಗಾರಿ: ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ
ಮುಂದಿನ ಲೇಖನದಲಿತ ಯುವಕನ ಹತ್ಯೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ; ಸಚಿವ ಮುರುಗೇಶ್‌ ನಿರಾಣಿ