ಬೆಂಗಳೂರು : ಎಟಿಎಂಗೆ ಹಣ ಹಾಕುವ ಕಾರು ತಡೆದು 7 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಪತಿಯಲ್ಲಿ ಇನ್ನೋವಾ ಕಾರು ಪತ್ತೆಯಾಗಿದೆ. ಇನ್ನೋವಾ ಕಾರು ಬಿಟ್ಟು ಆರೋಪಿಗಳು ಬೇರೆ ಕಡೆ ಎಸ್ಕೇಪ್ ಆಗಿರುವ ಸಾಧ್ಯತೆ ಇದೆ. ಹಣದ ಸಮೇತ ಬೇರೆ ವಾಹನದಲ್ಲಿ ಎಸ್ಕೇಪ್ ಆಗಿರಬಹುದು ಎಂದು ಶಂಕಿಸಲಾಗಿದೆ. ತಿರುಪತಿ ಸುತ್ತಮುತ್ತ ಪೊಲೀಸರು ಸಿಸಿಟಿವಿಗಳ ಹುಡುಕಾಟ ನಡೆಸುತ್ತಿದ್ದಾರೆ.
ಎಟಿಎಂ ಘಟಕಗಳಿಗೆ ಹಣ ಪೂರೈಸುತ್ತಿದ್ದ ಖಾಸಗಿ ಏಜೆನ್ಸಿ ವಾಹನವನ್ನು ಆರ್ಬಿಐ ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿ ಬಳಿಕ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿ ದುಷ್ಕರ್ಮಿಗಳು 7.11 ಕೋಟಿ ಹಣ ದೋಚಿ ಪರಾರಿಯಾಗಿದ್ದಾರೆ.
ಜೆಪಿ ನಗರದ ಹೆಚ್ಡಿಎಫ್ಸಿ ಬ್ಯಾಂಕ್ನಿಂದ ಹಣ ಸಂಗ್ರಹಿಸಿ ಗೋವಿಂದಪುರ ಎಟಿಎಂ ಘಟಕಗಳಿಗೆ ತುಂಬಲು ಸಿಎಂಎಸ್ ಏಜೆನ್ಸಿಯ ನಾಲ್ವರು ಸಿಬ್ಬಂದಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ವಾಹನ ತಡೆಗಟ್ಟಿ ಆರ್ಬಿಐ ಅಧಿಕಾರಿಗಳ ಸೋಗಿನಲ್ಲಿ ಆರೋಪಿಗಳು ದರೋಡೆ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಎನ್ನಲಾಗಿದೆ.















