ಮೈಸೂರು (Mysuru): ದೈಹಿಕವಾಗಿ ಆರೋಗ್ಯವಾಗಿದ್ದರೆ ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯ. ಅದಕ್ಕಾಗಿ ಧ್ಯಾನ, ಯೋಗ ಹಾಗೂ ದೈಹಿಕ ಚಟುವಟಿಕೆಗಳನ್ನು ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ದೇವರಾಜ ಭೂತೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯಕ್ರಮದಡಿ ಕೋಟೆ ಆಂಜನೇಯ ದೇವಸ್ಥಾನ ಅರಮನೆ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ-2022 ರ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜನರು ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೆ ನಮ್ಮ ಮನಸ್ಥಿತಿಯಿಂದ ನಾವು ಕೆಲಸ ಮಾಡಿದರೆ ಅದರ ಫಲಿತಾಂಶದ ಬಗ್ಗೆ ಚಿಂತೆ ಮಾಡದೆ ಇದ್ದರೆ ಯಾವುದೇ ರೀತಿಯ ಮಾನಸಿಕ ಒತ್ತಡ ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮೊಬೈಲ್ ವ್ಯಸನರಾಗಿದ್ದಾರೆ ಇದರಿಂದ ಹೊರಬರುವಂತಹ ಯಾವುದಾದರೂ ಕಾರ್ಯಕ್ರಮ ಮಾಡುವಂತೆ ಸಲಹೆ ನೀಡಿದರು.
ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಪ್ರಸಾದ್ ಅವರು ಮಾತನಾಡಿ, ಇಡೀ ವಿಶ್ವದಲ್ಲಿ ಮಾನಸಿಕ ರೋಗಿಗಳು ಸುಮಾರು ಶೇ.5 ರಷ್ಟು ಇದ್ದಾರೆ. ವಿವಿಧ ಪ್ರಕಾರದ ಮಾನಸಿಕ ಅಸ್ವಸ್ಥತೆಯಿಂದ ಜನರು ಬಳಲುತ್ತಿದ್ದಾರೆ ಎಂದು ಹೇಳಿದರು.
ಮಾನಸಿಕ ರೋಗಿಗಳನ್ನು ಒಂದು ಕಡೆ ರಕ್ಷಣೆ ಮಾಡಿ ಮಾನಸದಾರ ಎಂಬ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಮಾಡುತ್ತಿದ್ದೇವೆ. ಮಾನಸಿಕ ರೋಗದಲ್ಲಿ ಸ್ಕಿಜೋಫ್ರೀನಿಯಾ ಎನ್ನುವುದು ಒಂದು ಕಾಯಿಲೆ. ಮಾನಸಿಕ ಅಸಮತೋಲನ, ಕಿಮೋ ರಿಸಪ್ಟರ್ಸ್, ಕಿಮೋಟ್ರಾನ್ಸಿ್ಮರ್ಸ್ ಕೊರತೆಯಿಂದ ಈ ಕಾಯಿಲೆ ಬರುತ್ತದೆ. ಅದನ್ನು ಸರಿಪಡಿಸಿ ಅವರಿಗೆ ಚಿಕಿತ್ಸೆ ನೀಡುವಂತಹ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ಮಾಡುತ್ತದೆ. ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತನ್ನಿ ಎಂದು ಜನರಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ವಿಭಾಗಿಯ ಜಂಟಿ ನಿರ್ದೇಶಕರಾದ ಡಾ.ಉದಯಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ರಾಜೇಶ್ವರಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಮಂಜುಪ್ರಸಾದ್ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.