ಚಿಕ್ಕಬಳ್ಳಾಪುರ: ನನಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಆಗ್ರಹಿಸಿದ್ದಾರೆ.
ಸಚಿವ ಸ್ಥಾನ ಕೇಳಲು ನನಗೆ ಹಕ್ಕಿದೆ. ನನಗೆ ಸಚಿವ ಸ್ಥಾನ ಬೇಕು. ಅಪರೇಷನ್ ಕಮಲದಲ್ಲಿ ಬಿಜೆಪಿಯವರು ನನಗೆ ಸಚಿವ ಸ್ಥಾನದ ಆಫರ್ ಕೊಟ್ಟಿದ್ದರು. ಆದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ನಿಷ್ಟೆಯಿಂದ ಇದ್ದೆ. ಮುಂದೆ ಸಚಿವ ಸಂಪುಟ ಪುನರ್ ರಚನೆ ವೇಳೆ ನನಗೆ ಸಚಿವ ಸ್ಥಾನ ಕೊಡಬೇಕು ಎಂದು ಅವರು ಹೇಳಿದ್ದಾರೆ.
ನಾನು ಹಿರಿಯ ಶಾಸಕ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನನಗೆ ಸಂಪುಟದಲ್ಲಿ ಸ್ಥಾನ ಕೊಡುವ ಭರವಸೆ ಇದೆ. ನಾನು ಎರಡು ಬಾರಿ ನಿಗಮ ಮಂಡಳಿ ತಿರಸ್ಕಾರ ಮಾಡಿದ್ದೇನೆ. ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಗೌರಿಬಿದನೂರು, ಚಿಂತಾಮಣಿ ಕ್ಷೇತ್ರದ ಎಲ್ಲರೂ ಸಚಿವರಾಗಿದ್ದಾರೆ. ಬಾಗೇಪಲ್ಲಿಯಿಂದ ಇದುವರೆಗೂ ಯಾರೂ ಕೂಡ ಸಚಿವರಾಗಿಲ್ಲ. ಹಾಗಾಗಿ ನನಗೆ ಸಚಿವ ಸ್ಥಾನ ಕೊಡಬೇಕು ಎಂದು ಬೇಡಿಕೆ ಇಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.














