ಹುಬ್ಬಳ್ಳಿ: ಇಲ್ಲಿನ ಸಾಯಿನಗರ ಅಚ್ಚವ್ವನ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿ ಗಂಭೀರವಾಗಿ ಸುಟ್ಟುಗೊಂಡಿದ್ದ ಇಬ್ಬರು ಮಾಲಾಧಾರಿಗಳು ಗುರುವಾರ(ಡಿ.26) ಬೆಳಗಿನ ಜಾವ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ನಿಜಲಿಂಗಪ್ಪ ಬೇಪುರಿ ( 58 ವರ್ಷ) ಹಾಗೂ ಸಂಜಯ ಸವದತ್ತಿ (18) ಮೃತಪಟ್ಟಿದ್ದಾರೆ.
ರವಿವಾರ ಅಯ್ಯಪ್ಪಸ್ವಾಮಿ ವ್ರತಧಾರಿಗಳು ಪೂಜೆ ಸಲ್ಲಿಸಿ ರಾತ್ರಿ ನಿದ್ರೆಗೆ ಜಾರಿದಾಗ ಗೃಹ ಬಳಕೆಯ ಅನಿಲ ಸೋರಿಕೆಯಾಗಿ ಕೋಣೆ ತುಂಬೆಲ್ಲ ಬೆಂಕಿ ಆವರಿಸಿಕೊಂಡು ಬಾಲಕ ಸೇರಿ ಒಂಭತ್ತು ಮಾಲಾಧಾರಿಗಳು ಸುಟ್ಟುಕೊಂಡಿದ್ದರು. ಇವರಲ್ಲಿ ಬಾಲಕ ಹೊರತುಪಡಿಸಿ ಉಳಿದವರೆಲ್ಲರು ಶೇ. 80ಕ್ಕೂ ಹೆಚ್ಚು ಪ್ರಮಾಣದಲ್ಲಿ ಸುಟ್ಟು ಗಾಯಗೊಂಡಿದ್ದರು. ಅವರೆಲ್ಲರು ಕೆಎಂಸಿಆರ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಬೆಳಗಿನ ಜಾವ ಚಿಕಿತ್ಸೆಗೆ ಸ್ಪಂದಿಸದೆ ನಿಜಲಿಂಗಪ್ಪ ಮತ್ತು ಸಂಜಯ ಮೃತಪಟ್ಟಿದ್ದಾರೆ.
ಇನ್ನುಳಿದ ಆರು ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














