ಬೆಳಗಾವಿ: ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ (92) ಅವರ ನಿಧನಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ಸೂಚಿಸಿದ್ದಾರೆ.
ಡಾ. ಮನಮೋಹನ ಸಿಂಗ್ ಅವರು, ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಮೂಲಕ ಭಾರತದ ಆರ್ಥಿಕ ಸುಧಾರಣೆಯ ಶಿಲ್ಪಿ ಎಂದೇ ಖ್ಯಾತರಾಗಿದ್ದರು. ದೇಶದದ ಆರ್ಥಿಕತೆಗೆ ಭದ್ರ ಬುನಾದಿ ಹಾಕಿದ್ದರು. ಅವರ ನಿಧನದಿಂದ ಭಾರತ ಸಜ್ಜನ ರಾಜಕಾರಣಿ ಮತ್ತು ಉತ್ತಮ ಆಡಳಿತಗಾರರನ್ನು ಕಳೆದುಕೊಂಡಿದೆ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಮಾಹಿತಿ ಹಕ್ಕು ಕಾಯಿದೆಯ ಮೂಲಕ ಜನ ಸಾಮಾನ್ಯರಿಗೆ ಸರ್ಕಾರದಿಂದ ಮಾಹಿತಿ ಪಡೆಯುವ ಹಕ್ಕು ನೀಡಿದ, ಶಿಕ್ಷಣದ ಹಕ್ಕು ಕಾಯಿದೆ ಜಾರಿಗೆ ತಂದು ಯಾರೊಬ್ಬರೂ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗದಂತೆ ಕಾಳಜಿ ವಹಿಸಿದ ಮುತ್ಸದ್ದಿ ಡಾ. ಮನಮೋಹನಸಿಂಗ್ ಅವರ ದೂರದರ್ಶಿತ್ವದ ನಿರ್ಧಾರಗಳು ಅವರನ್ನು ಸದಾ ಸ್ಮರಿಸುವಂತೆ ಮಾಡುತ್ತವೆ ಎಂದೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಮಾಜಿ ಪ್ರಧಾನಿಯವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಡಾ. ಸಿಂಗ್ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಬಂಧು ಮಿತ್ರರು ಹಾಗೂ ಅಪಾರ ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ರಿಜರ್ವ್ ಬ್ಯಾಂಕ್ ಗೌವರ್ನರ್ ಆಗಿ, ವಿಶ್ವ ವಿದ್ಯಾಲಯಗಳ ಹಣಕಾಸು ಆಯೋಗದ ಅಧ್ಯಕ್ಷರಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಹಣಕಾಸು ಸಚಿವರಾಗಿ ನಂತರ 2004ರಿಂದ 2014ರವರೆಗೆ ಪ್ರಧಾನಮಂತ್ರಿಗಳಾಗಿ ಭಾರತವನ್ನು ಮುನ್ನಡೆಸಿದ ಡಾ. ಮನಮೋಹನಸಿಂಗ್ ಅವರ ನಿಧನದಿಂದ ಈ ದೇಶ ಒಬ್ಬ ಮೇಧಾವಿ ಅರ್ಥಶಾಸ್ತ್ರಜ್ಞರನ್ನು ಕಳೆದುಕೊಂಡಿದೆ. ಓಂ ಶಾಂತಿ ಎಂದು ತಿಳಿಸಿದ್ದಾರೆ.














