ಶ್ರೀರಂಗಪಟ್ಟಣ: ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಶೌಚಾಲಯ ಕಾರ್ಯನಿರ್ವಹಣೆ ಹಾಗೂ ಆವರಣ ಶುಚಿತ್ವ ಕಾಪಾಡಲೆಂದು ಸರ್ಕಾರದಿಂದ 3 ವರ್ಷಕ್ಕೊಮ್ಮೆ ಆನ್ಲೈನ್ ಪ್ರಕ್ರಿಯೆಯಲ್ಲಿ ಗುತ್ತಿಗೆ ಕರೆಯಲಾಗುತ್ತದೆ.
ಗುತ್ತಿಗೆ ಪಡೆದ ಖಾಸಗಿ ವ್ಯಕ್ತಿಯು ಬಸ್ ನಿಲ್ದಾಣಗಳ ಶೌಚಾಲಯ ಹಾಗೂ ಆವರಣ ಶುಚಿತ್ವವನ್ನು ಕಾಯ್ದುಕೊಳ್ಳಲು 18 ವರ್ಷ ಮೇಲ್ಪಟ್ಟ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು ಎಂಬ ನಿಯಮವಿದ್ದರೂ ಶ್ರೀರಂಗಪಟ್ಟಣ ಸರಕಾರಿ ಬಸ್ ನಿಲ್ದಾಣದಲ್ಲಿ 16 ಹಾಗೂ 17 ವಯೋಮಿತಿಯ ಬಿಹಾರಿ ಮೂಲದ ಹೊರಗುತ್ತಿಗೆ ನೌಕರರ ಕರೆತಂದು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. 18 ವರ್ಷದೊಳಗಿನವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದು ಶಿಕ್ಷಾರ್ಹ ಎಂಬ ವಿಷಯ ತಿಳಿದಿದ್ದರೂ ಗುತ್ತಿಗೆದಾರ ಮಂಡ್ಯ ಮೂಲದ ಮಂಜುನಾಥ್ ಈ ತಪ್ಪನ್ನು ಎಸಗಿದ್ದಾರೆ.
ಜೊತೆ ಜೊತೆಯಲ್ಲೇ ಕಾರ್ಮಿಕರಿಗೆ ಮೂಲಭೂತ ಸೌಕರ್ಯದಲ್ಲೊಂದಾದ ಇಎಸ್ಐ ಹಾಗೂ ಪಿಎಫ್ ಎರಡನ್ನು ನೀಡದೆ ವಂಚಿಸಿ 6 ವರ್ಷ ಕಾರ್ಯನಿರ್ವಹಿಸುತ್ತಿದ್ದ ಹೊರಗುತ್ತಿಗೆ ನೌಕರನನ್ನು ಏಕಾಏಕಿ ಕೆಲಸದಿಂದ ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಖಾಸಗಿ ವ್ಯಕ್ತಿಯು ಮಂಡ್ಯ ಜಿಲ್ಲೆಯ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಶ್ರೀರಂಗಪಟ್ಟಣದ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೂ ಕರೆಯ ಮುಖಾಂತರ ಸಾಕ್ಷಿ ಸಮೇತ ಮನವಿ ಮಾಡಿದರು ಕೂಡ ಸಂಬಂಧಪಟ್ಟ ಅಧಿಕಾರಿಗಳು ವಿಚಾರಣೆ ನಡೆಸದೆ ಗುತ್ತಿಗೆದಾರನ ಪರವಾಗಿ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.














