ಮೈಸೂರು: ಮಾಹಿತಿ ಹಕ್ಕಿನಲ್ಲಿ ಬಂದ ಅರ್ಜಿಗೆ ಕಾಲಮಿತಿಯೊಳಗೆ ಮಾಹಿತಿ ನೀಡದ ಆರೋಪದಲ್ಲಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ನಂದಕುಮಾರ್ ಹಾಗೂ ಹಿಂದಿನ ಅಧಿಕಾರಿ ಎಚ್. ಎಂ.ಮಹದೇವಪ್ಪ ಅವರಿಗೆ ಕರ್ನಾಟಕ ಮಾಹಿತಿ ಆಯೋಗವು ತಲಾ ₹25 ಸಾವಿರ ದಂಡ ವಿಧಿಸಿದ್ದು, ದೂರುದಾರ ಸಾ.ತಿ. ಸದಾನಂದಗೌಡ ಅವರಿಗೆ ₹15 ಸಾವಿರ ಪರಿಹಾರಧನ ನೀಡಲು ಆದೇಶಿಸಿದೆ
ನಗರದ ವಕೀಲ ಸಾ.ತಿ. ಸದಾನಂದ ಗೌಡ ಅವರು ಮಾಹಿತಿ ‘ಹಕ್ಕಿನ ಮೂಲಕ ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ಅದ್ದೀಹಳ್ಳಿ ಗ್ರಾಮದಿಂದ ಹೊನ್ನಾವರ ಗ್ರಾಮದವರೆಗೆ ನಡೆದಿರುವ ಹಾಗೂ ನಡೆಯುತ್ತಿರುವ ರಸ್ತೆ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎರಡು ವರ್ಷ ಎಂಟು ತಿಂಗಳು ಕಳೆದರೂ ಮಾಹಿತಿ ನೀಡಿರಲಿಲ್ಲ. ಈ ಬಗ್ಗೆ ಅರ್ಜಿದಾರರು ಕರ್ನಾಟಕ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಿದ್ದರು. ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಎಚ್.ಸಿ.ಸತ್ಯನ್ ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸಿದ್ದಾರೆ.














