ಮನೆ ಅಪರಾಧ ಮೈಸೂರಿನಲ್ಲಿ ಮರ್ಯಾದಾ ಹತ್ಯೆ: ಮಗಳನ್ನೇ ಕೊಂದ ತಂದೆ

ಮೈಸೂರಿನಲ್ಲಿ ಮರ್ಯಾದಾ ಹತ್ಯೆ: ಮಗಳನ್ನೇ ಕೊಂದ ತಂದೆ

0

ಮೈಸೂರು(Mysuru):  ಮಗಳು ಕೆಳ ಜಾತಿಯ ಯುವಕನನ್ನು ಪ್ರೀತಿಸಿ, ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದ ಕಾರಣಕ್ಕಾಗಿ ಹೆತ್ತವರೇ ಆಕೆಯನ್ನು ಹತ್ಯೆಗೈದಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ನಡೆದಿದೆ.

ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದ ನಿವಾಸಿ ಸುರೇಶ್ ಹಾಗೂ ಬೇಬಿ ದಂಪತಿಯ ಪುತ್ರಿ ಮೃತ ದುರ್ದೈವಿ.

ಪಿರಿಯಾಪಟ್ಟಣದ ಕಾಲೇಜೊಂದರಲ್ಲಿ ಓದುತ್ತಿದ್ದ ಯುವತಿ, ಗ್ರಾಮಕ್ಕೆ ಸಮೀಪವಿರುವ ಮೆಲ್ಲಹಳ್ಳಿ ಬೋರೆ ಗ್ರಾಮದ ಪರಿಶಿಷ್ಟ ಜನಾಂಗಕ್ಕೆ ಸೇರಿದ ಮಂಜು ಎಂಬ ಯುವಕನನ್ನು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದಳು.

ವಿಷಯ ತಿಳಿದ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ, ಕೇಳದ ಯುವತಿ ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದ ವೇಳೆ ಪಟ್ಟಣದ ಪೊಲೀಸ್ ಠಾಣೆಗೆ ಯುವಕನ ವಿರುದ್ಧ ದೂರು ನೀಡಿದ್ದರು.

ಆ ಸಮಯದಲ್ಲಿ ಯುವತಿ ಆತನನ್ನೇ ಪ್ರೀತಿಸುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಆದರೆ ಆಕೆಗೆ 18 ವರ್ಷ ತುಂಬಿರದ ಕಾರಣ ಪೊಲೀಸರು ಮೈಸೂರಿನ ಬಾಲಮಂದಿರಕ್ಕೆ ಕಳುಹಿಸಿದ್ದರು. ಆದರೆ ಕಳೆದ ಕೆಲವು ದಿನಗಳ ಹಿಂದೆ ಯವತಿ ತನ್ನ ಪೋಷಕರಿಗೆ ಕರೆ ಮಾಡಿ ಇಲ್ಲಿಂದ ಕರೆದುಕೊಂಡು ಹೋಗುವಂತೆ ಹೇಳಿದ್ದಾಳೆ. ಹೀಗಾಗಿ ಮಗಳ ಮನಸ್ಸು ಬದಲಾಯಿಸಿದ್ದು, ಇನ್ನು ಮುಂದೆ ಸರಿಹೋಗಬಹುದೆಂದು ನಂಬಿ ಪೋಷಕರು ಬಾಲಮಂದಿರಕ್ಕೆ ಒಪ್ಪಿಗೆ ಪತ್ರ ಬರೆದುಕೊಟ್ಟು ತಮ್ಮ ಮಗಳನ್ನು ಸ್ವಗ್ರಾಮಕ್ಕೆ ಕರೆತಂದಿದ್ದರು.

ಸೋಮವಾರ ರಾತ್ರಿ ಮತ್ತೆ ತನ್ನ ಪೋಷಕರೊಂದಿಗೆ ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಹೋಗುವುದಾಗಿ ಹಠ ಮಾಡಿ ಕುಳಿತಾಗ ಆಕೆಯ ತಂದೆ ಸುರೇಶ್ ಒಪ್ಪಲಿಲ್ಲ. ಮಗಳ ಕತ್ತು ಹಿಸುಕಿ ಕೊಲೆ ಮಾಡಿ ತನ್ನ ಪತ್ನಿ ಬೇಬಿಯೊಂದಿಗೆ ಸೇರಿ ಆಕೆ ಪ್ರೀತಿಸುತ್ತಿದ್ದ ಹುಡುಗನ ಗ್ರಾಮದ ಜಮೀನೊಂದರ ಬಳಿ ಎಸೆದು ಹೋಗಿದ್ದಾರೆ. ಬಳಿಕ ಮಂಗಳವಾರ ಬೆಳಿಗ್ಗೆ 6.30 ರ ಸಮಯದಲ್ಲಿ ಸುರೇಶ್ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಬಂದು ಮಗಳನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡು ಪೊಲೀಸರ ಮುಂದೆ ಶರಣಾಗಿದ್ದಾನೆ.

ಆರೋಪಿ ಹೇಳಿಕೆ ಆಧರಿಸಿ ಪೊಲೀಸರು ಸ್ವ ವರದಿ ದಾಖಲಿಸಿಕೊಂಡು ಆರೋಪಿ ಸುರೇಶನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್, ಅಪರ ಎಸ್ಪಿ ಶಿವಕುಮಾರ್, ಡಿವೈಎಸ್ ಪಿ ರವಿಪ್ರಸಾದ್, ಸಿಪಿಐ ಗಳಾದ ಜಗದೀಶ್, ಪ್ರಕಾಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.