ಮೈಸೂರು: ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಸಲ್ಲಿಸಿದ ಅರ್ಜಿ ಹೈಕೋರ್ಟ್ನಲ್ಲಿ ವಜಾ ಆಗಿದ್ದು, ಈ ಬಗ್ಗೆ ಮುಂದಿನ ವಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸುತ್ತೇನೆ.
ನನಗೆ ಈ ತೀರ್ಪು ಸ್ವಲ್ವ ಹಿನ್ನೆಡೆಯಾಗಿದೆ. ಆದರೂ ಹೋರಾಟ ಮುಂದುವರೆಸುತ್ತೇನೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್ ತೀರ್ಪು ನಂತರ ಮಾಧ್ಯಮಾಗಳಿಗೆ ಹೇಳಿಕೆ ನೀಡಿದರು.
ನಮ್ಮ ಅರ್ಜಿ ವಜಾವಾಗಿದೆ ಎಂದು ತಿಳಿದು ಬಂದಿದೆ. ನಮ್ಮ ಹೋರಾಟಕ್ಕೆ ಹಿನ್ನೆಡೆಯಾಗಿದೆ. ಇದರಿಂದ ವಿಚಲಿತನಾಗುವ ಹಾಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮ್ಮ ಹೋರಾಟ ಮುಂದುವರೆಸುತ್ತೇವೆ. ಮುಂದಿನ ವಾರ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಲಾಗುತ್ತದೆ. ಹಾಗೂ ಈ ಪ್ರಕರಣವನ್ನು ಸಿಬಿಐಗೆ ಕೊಡಿಸುವ ಪ್ರಯತ್ನದ ಹೋರಾಟ ಮುಂದುವರೆಸಿಕೊಂಡು ಹೋಗುತ್ತೇವೆ ಎಂದರು.
ಕೋರ್ಟ್ ಇಂದಿನ ತೀರ್ಪಿನಲ್ಲಿ ಯಾವ ಅಂಶಗಳನ್ನು ಪರಿಗಣಿಸಿ ನಮ್ಮ ಅರ್ಜಿ ತಿರಸ್ಕಾರ ಮಾಡಿದೆ ಹಾಗೂ ಆ ಅಂಶಗಳಿಗೆ ಯಾವ ರೀತಿ ಪೂರಕ ದಾಖಲೆಗಳನ್ನು ನೀಡಬೇಕು ಎಂದು ನಮ್ಮ ವಕೀಲರ ಜತೆ ಚರ್ಚಿಸಿ, ನಂತರ ಈ ತೀರ್ಪಿನ ವಿರುದ್ಧ ಸುಪ್ರೀಂ ಅಂಗಳಕ್ಕೆ ಹೋಗುತ್ತೇವೆ ಎಂದರು.
ಕೋರ್ಟ್ ನೀಡಿರುವ ತೀರ್ಪುನ್ನು ಇನ್ನೂ ಓದಿಲ್ಲ. ಲೋಕಾಯುಕ್ತ ಏಕಪಕ್ಷೀಯವಾಗಿ ವರದಿ ನೀಡಿದೆ. ನಾವು ದೂರು ಕೊಡುವ ಮುನ್ನ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡಿತು. ಆದರೆ, ಆ ವಿಚಾರವನ್ನು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಿಳಿಸಿದರು. ನಂತರ ಸಚಿವರು ಬಂದು ದಾಖಲೆಗಳನ್ನು ತೆಗೆದುಕೊಂಡು ಹೋದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆ ನಡೆಸಿತು. ಲೋಕಾಯುಕ್ತ ಆರೋಪಿಗಳೊಂದಿಗೆ ಶಾಮೀಲಾಗಿದೆ ಎಂದು ತಿಳಿದು ಬಂದಿರುತ್ತದೆ ಎಂದು ಹೇಳಿದರು.
ಮುಂದಿನ ವಾರದಲ್ಲಿ ನಾವು ಸುಪ್ರೀಂಗೆ ಅರ್ಜಿ ಸಲ್ಲಿಸುತ್ತೇವೆ. ಇಲ್ಲಿ ನಾವು ಕಾಯುವ ಪ್ರಶ್ನೆಯೇ ಬರುವುದಿಲ್ಲ. ತನಿಖಾ ಸಂಸ್ಥೆಯ ವರದಿಯ ಆಧಾರದ ಮೇಲೆ ತೀರ್ಪು ನೀಡಲಾಗಿದೆ. ಆರೋಪಿಗಳು ಯಾವುದೇ ಕಾರಣಕ್ಕೂ ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದೊಂದು ಸಣ್ಣ ಹಿನ್ನೆಡೆಯಾಗಿದೆ. ಯುದ್ದದಲ್ಲಿ ಸೋಲು ಗೆಲುವು ಸಾಮಾನ್ಯ. ಲೋಕಾಯುಕ್ತ ಸಂಸ್ಥೆಯ ವರದಿ ಬಗ್ಗೆ ನನಗೆ ವಿಶ್ವಾಸವಿಲ್ಲ. ಆರೋಪಿಗಳನ್ನು ರಕ್ಷಣೆ ಮಾಡುವಂತೆ ಲೋಕಾಯುಕ್ತ ತನಿಖೆ ನಡೆಸಿದೆ ಎಂದು ನನಗೆ ಈಗಲೂ ಅನುಮಾನಗಳಿವೆ ಎಂದ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದರು.














