ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಾಗಿ ಒಂದು ವರ್ಷ ಕಳೆದರೂ ಕೆಲ ಕಾಂಗ್ರೆಸ್ ನಾಯಕರಿಗೆ ಈಗಲೂ ಇದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ನಿಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಿಂದೂಗಳ ಶ್ರದ್ಧೆ, ನಂಬಿಕೆಗಳ ಜತೆ ಚೆಲ್ಲಾಟವಾಡುವುದನ್ನ ಬಿಟ್ಟುಬಿಡಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಸಚಿವ ಮಹಾದೇವಪ್ಪನವರೇ, ಹಿಂದೂಗಳ ಒಗ್ಗಟ್ಟು, ಸಂಭ್ರಮ ಕಂಡರೆ ನಿಮಗೆ ಯಾಕಿಷ್ಟು ಅಸೂಯೆ?ಎಂದು ಪ್ರಶ್ನಿಸಿದ್ದಾರೆ.
ಆದಿಕವಿ ಮಹರ್ಷಿ ವಾಲ್ಮೀಕಿಯ ಶ್ರೀರಾಮನೇ ಬೇರೆ, ಅಯೋಧ್ಯೆಯ ಶ್ರೀರಾಮನೇ ಬೇರೆ ಎಂದು ಹೇಳಿದ್ದೀರಲ್ಲ ಹಾಗಾದರೆ ರಾಷ್ಟ್ರಕವಿ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಕೃತಿಯಲ್ಲಿ ಬರುವ ರಾಮ ಯಾರು? ವಾಲ್ಮೀಕಿಯ ರಾಮನೋ ಅಥವಾ ಅಯೋಧ್ಯೆಯ ರಾಮನೋ? ಹಿಂದೂಗಳ ಒಗ್ಗಟ್ಟನ್ನು ಒಡೆಯುವ, ಹಿಂದೂ ಸಮಾಜದಲ್ಲಿ ಒಡಕು ಮೂಡಿಸುವ ಈ ಕಮ್ಯುನಿಸ್ಟ್ ಸಿದ್ಧಾಂತಗಳಿಗೆ ನವಭಾರತದಲ್ಲಿ ಜಾಗವಿಲ್ಲ. ಎಡಪಂಥೀಯ ವಿಚಾರಧಾರೆಯಿಂದ ಪ್ರಣೀತವಾದ ಇಂತಹ ಕಪೋಲಕಲ್ಪಿತ ಕಟ್ಟುಕಥೆಗಳನ್ನ, ವಿತಂಡವಾದವನ್ನ ನಂಬುವವರೂ ಇಲ್ಲ. ನಿಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಿಂದೂಗಳ ಶ್ರದ್ಧೆ, ನಂಬಿಕೆಗಳ ಜೊತೆ ಚೆಲ್ಲಾಟವಾಡುವುದನ್ನ ಬಿಟ್ಟುಬಿಡಿ’ ಎಂದು ಅಶೋಕ್ ಕಿಡಿಕಾರಿದ್ದಾರೆ.














