ಬೆಂಗಳೂರು (Bengaluru): ಲಂಚ ಸ್ವೀಕರಿಸಿದ ಅಧಿಕಾರಿಯೊಬ್ಬರಿಗೆ 8 ವರ್ಷ ಶಿಕ್ಷೆ ವಿಧಿಸಿ 20ನೇ ಬೆಂಗಳೂರು ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ (ವಿಶೇಷ ನ್ಯಾಯಾಧೀಶರು ಭ್ರಷ್ಟಚಾರ ನಿಗ್ರಹ ಕಾಯ್ದೆ) ತೀರ್ಪು ನೀಡಿದೆ.
2017ರ ಮೇ ನಲ್ಲಿ ಸಂಘವೊಂದರ ನೋಂದಣಿ ಮಾಡಲು ಸಹಕಾರ ಅಭಿವೃದ್ಧಿ ಅಧಿಕಾರಿಯೊಬ್ಬರು 7500 ರೂ. ಲಂಚ ಸ್ವೀಕರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಧಿಕಾರಿ ಹೆಚ್.ಪಿ.ಸದಾಶಿವ ಅವರಿಗೆ 8 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಕೆ.ಲಕ್ಷ್ಮೀ ನಾರಾಯಣ ಭಟ್ ಅವರು ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ.
ಪ್ರಕರಣದ ವಿವರ:
ಬೆಂಗಳೂರಿನ ಯಲಹಂಕ ನಿವಾಸಿಯೊಬ್ಬರು ತಮ್ಮ ಸ್ನೇಹಿತನ ಮುಖಾಂತರ ಕೋರಮಂಗಲದ ಧನುಷ್ ಶ್ರೀ ಅಪಾರ್ಟಮೆಂಟ್ ಓನರ್ಸ್ ಅಸೋಸಿಯೇಷನ್ಸ್ ಹೆಸರಿನಲ್ಲಿ ಸಂಘವನ್ನು ತೆರೆಯಲು ನೋಂದಣಿ ಮಾಡುವ ಸಲುವಾಗಿ ಚಾಮರಾಜ ಪೇಟೆಯಲ್ಲಿರುವ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದರು. ಈ ವೇಳೆ ಸರ್ಕಾರಿ ಅಧಿಕಾರಿ ಸದಾಶಿವ ಅವರು ಸಂಘವನ್ನು ನೋಂದಣಿ ಮಾಡಿಕೊಡುವ ಸಲುವಾಗಿ ಪಿರ್ಯಾದುದಾರರಿಗೆ 10 ಸಾವಿರ ರೂ. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು.
ಈ ಕುರಿತಂತೆ ಬೆಂಗಳೂರು ನಗರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು.