ಮನೆ ರಾಜ್ಯ ಬೆಂಗಳೂರು : ಹೆಚ್‌ಎಎಲ್‌ನಲ್ಲಿ ಹೈ ಅಲರ್ಟ್, ಸಿಬ್ಬಂದಿಗೆ ಓವರ್‌ ಟೈಂ ಕಾರ್ಯದ ಸೂಚನೆ!

ಬೆಂಗಳೂರು : ಹೆಚ್‌ಎಎಲ್‌ನಲ್ಲಿ ಹೈ ಅಲರ್ಟ್, ಸಿಬ್ಬಂದಿಗೆ ಓವರ್‌ ಟೈಂ ಕಾರ್ಯದ ಸೂಚನೆ!

0

ಬೆಂಗಳೂರು: ಆಪರೇಷನ್ ಸಿಂಧೂರ್ ನಂತರದ ಬೆಳವಣಿಗೆಗಳಿಂದ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯುದ್ಧದ ವಾತಾವರಣ ಸೃಷ್ಟಿಯಾಗಿರುವ ಸಂದರ್ಭದಲ್ಲೇ ಬೆಂಗಳೂರಿನಲ್ಲಿರುವ ಹೆಚ್​ಎಎಎಲ್​​ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹೆಚ್​ಎಎಎಲ್​​ನ ಎಲ್ಲ ಸಿಬ್ಬಂದಿಯ ರಜೆ ರದ್ದುಗೊಳಿಸಲಾಗಿದ್ದು, ಓವರ್ ಟೈಂ ಕೆಲಸಕ್ಕೆ ಸಿದ್ಧರಿರುವಂತೆ ಸೂಚಿಸಲಾಗಿದೆ. ಯುದ್ಧ ವಿಮಾನಗಳ ನಿರ್ವಹಣೆಯ ಕಾರಣ ಕಡ್ಡಾಯ ಹಾಜರಿರುವಂತೆ ಸಿಬ್ಬಂದಿಗೆ, ತಂತ್ರಜ್ಞರಿಗೆ ಸೂಚನೆ ನೀಡಲಾಗಿದೆ. ತುರ್ತು ಪರಿಸ್ಥಿತಿ ಎದುರಿಸಲು ತಯಾರಿ ನಡೆಸುವಂತೆ ನಿರ್ದೇಶನ ನೀಡಿದೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಭಾರತೀಯ ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಯಾಗಿದೆ. 1940 ರ ಡಿಸೆಂಬರ್ 23 ರಂದು ಸ್ಥಾಪನೆಯಾದ ಹೆಚ್​​ಎಎಲ್ ವಿಶ್ವದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪನ್ನಗಳ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿದೆ.

ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನವು ಭಾರತದ 15 ನಗರಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ಮಾಡಲು ಮುಂದಾಗಿದ್ದು, ಅದನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆ ತಡೆದಿದೆ. ಇದರ ಬೆನ್ನಲ್ಲೇ ಭಾರತೀಯ ಸೇನೆ ಕೂಡ ಪಾಕಿಸ್ತಾನದ ಅದೇ ತೀವ್ರತೆಯಲ್ಲಿ ಲಾಹೋರ್, ಕರಾಚಿಗಳ ಮೇಲೆ ದಾಳಿ ನಡೆದಿತ್ತು. ನಂತರ ಮತ್ತೆ ಪಾಕಿಸ್ತಾನ ಜಮ್ಮು ವಾಯುನೆಲೆಯ ಮೇಲೆ ದಾಳಿಗೆ ಯತ್ನಿಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನಾ ಪಡೆಗಳು ಮಿಂಚಿನ ದಾಳಿ ನಡೆಸಿವೆ.

ಪಾಕಿಸ್ತಾನದ ಪ್ರಚೋದನಕಾರಿ ಕ್ರಮಕ್ಕೆ ಪ್ರತಿಕ್ರಿಯೆಯಾಗಿ, ಭಾರತವು ಪಾಕಿಸ್ತಾನದ ಮೇಲೆ ಸಂಪೂರ್ಣ ದಾಳಿ ನಡೆಸಿದೆ. ಲಾಹೋರ್, ಇಸ್ಲಾಮಾಬಾದ್, ಕರಾಚಿ, ಸಿಯಾಲ್‌ಕೋಟ್, ಬಹಾವಲ್ಪುರ್, ಪೇಶಾವರ್ ಮತ್ತು ಕೋಟ್ಲಿಯಲ್ಲಿ ತ್ವರಿತ ಪ್ರತೀಕಾರದ ಕ್ರಮ ಕೈಗೊಳ್ಳುವ ಮೂಲಕ ಭಾರತ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿದೆ. ಪಠಾಣ್‌ಕೋಟ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿತು. ಆದರೆ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯ ತ್ವರಿತ ಮತ್ತು ಪರಿಣಾಮಕಾರಿ ಕ್ರಮವು ಎಲ್ಲಾ ದಾಳಿಗಳನ್ನು ವಿಫಲಗೊಳಿಸಿತು.

ಪಾಕಿಸ್ತಾನದ ನಿರಂತರ ಪ್ರಚೋದನಕಾರಿ ಕ್ರಮಗಳು ಮತ್ತು ಕದನ ವಿರಾಮ ಉಲ್ಲಂಘನೆಗಳಿಗೆ ಪ್ರತಿಕ್ರಿಯೆಯಾಗಿ ಭಾರತವು ಕರಾಚಿ ಬಂದರನ್ನು ಗುರಿಯಾಗಿಸಿಕೊಂಡು ದೊಡ್ಡ ದಾಳಿ ನಡೆಸಿದೆ. ಕರಾಚಿ ಬಂದರಿನಲ್ಲಿ ಹಲವಾರು ದೊಡ್ಡ ಸ್ಫೋಟಗಳು ಕೇಳಿಬಂದಿವೆ. ಭಾರತದ ಈ ಕ್ರಮದಿಂದಾಗಿ ಕರಾಚಿ ಬಂದರು ದೊಡ್ಡ ಮಟ್ಟದ ಹಾನಿಗೆ ಒಳಗಾಗಿದೆ ಎಂದು ಹೇಳಲಾಗುತ್ತಿದೆ.