ಬೆಂಗಳೂರು : ಗ್ರಾಹಕರ ಒತ್ತಾಯದ ಹೊರತಾಗಿಯೂ ಕನ್ನಡ ಮಾತನಾಡಲು ನಿರಾಕರಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ಬಿಐ ಶಾಖೆಯ ವ್ಯವಸ್ಥಾಪಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ಗ್ರಾಹಕರೊಬ್ಬರು ಕೆಲಸದ ನಿಮಿತ್ತ ಬೆಂಗಳೂರು ಹೊರವಲಯದ ಚಂದಾಪುರ ಎಸ್ಬಿಐ ಬ್ಯಾಂಕ್ಗೆ ಹೋದಾಗ ಕನ್ನಡ ಮಾತನಾಡುವಂತೆ ಮಹಿಳಾ ಬ್ಯಾಂಕ್ ಮ್ಯಾನೇಜರ್ ಬಳಿ ಕೇಳಿದ್ದಾರೆ. ಆದರೆ ಕನ್ನಡ ಮಾತನಾಡಲು ಒಪ್ಪದ ಮಹಿಳಾ ಮ್ಯಾನೇಜರ್ ಗ್ರಾಹಕನಿಗೆ ಹಿಂದಿಯಲ್ಲಿ ಮಾತನಾಡುವಂತೆ ಅವಾಜ್ ಹಾಕಿದ್ದು, ಇದು ಭಾರತ. ಬರೀ ಕರ್ನಾಟಕ ಮಾತ್ರ ಅಲ್ಲ. ನಾನು ಯಾವತ್ತೂ ಕನ್ನಡವನ್ನೇ ಮಾತಾಡಲ್ಲ. ಏನೇ ಆದರೂ ಅಂತ ಹೇಳುವ ಮೂಲಕ ಕನ್ನಡಿಗರನ್ನು ಕೆರಳಿಸಿದ್ದರು.
ಈ ಘಟನೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಎಸ್ಬಿಐ, ಮಹಿಳಾ ಮ್ಯಾನೇಜರ್ನನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಲಾಗಿದೆ.
“ಅಧಿಕಾರಿಯನ್ನು ವರ್ಗಾವಣೆ ಮಾಡುವಲ್ಲಿ ಎಸ್ಬಿಐನ ತ್ವರಿತ ಕ್ರಮವನ್ನು ನಾವು ಪ್ರಶಂಸಿಸುತ್ತೇವೆ. ಈ ವಿಷಯವನ್ನು ಈಗ ಮುಚ್ಚಿದ ವಿಷಯವೆಂದು ಪರಿಗಣಿಸಬಹುದು” ಎಂದು ಸಿಎಂ ಹೇಳಿದರು.
ಆದಾಗ್ಯೂ, ಇಂತಹ ಘಟನೆಗಳು ಮರುಕಳಿಸಬಾರದು. ಎಲ್ಲಾ ಬ್ಯಾಂಕ್ ನೌಕರರು ಗ್ರಾಹಕರನ್ನು ಘನತೆಯಿಂದ ಕಾಣಬೇಕು ಮತ್ತು ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.














