ಬೆಂಗಳೂರು (Bengaluru): ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪಿಎಸ್ಐ ಕೆ. ಹರೀಶ್ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಹರೀಶ್ ಅವರನ್ನು ಠಾಣೆಯಲ್ಲೇ ಬಂಧಿಸಿ ಕರೆದೊಯ್ಯಲಾಗಿದೆ. 2018ರಲ್ಲಿ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದ ಮಾಗಡಿ ತಾಲ್ಲೂಕಿನ ಹರೀಶ್, ಇತ್ತೀಚೆಗೆ ನಡೆದಿದ್ದ 545 ಪಿಎಸ್ಐ ಹುದ್ದೆಗಳ ಅಕ್ರಮ ಪ್ರಕರಣದಲ್ಲಿ ಬಂಧಿತನಾದ ಅಭ್ಯರ್ಥಿಯೊಬ್ಬರಿಗೆ ಸಹಾಯ ಮಾಡಿದ್ದ. ಅಭ್ಯರ್ಥಿ ಹೇಳಿಕೆ ಆಧರಿಸಿ ಹರೀಶ್ನನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ ಎಂದು ಸಿಐಡಿ ಮೂಲಗಳು ಹೇಳಿವೆ.
ರಿಸರ್ವ್ ಸಬ್ ಇನ್ಸ್ಪೆಕ್ಟರ್ (ಆರ್ಎಸ್ಐ) ಜೊತೆ ಒಡನಾಟ ಹೊಂದಿದ್ದ ಹರೀಶ್, ಪರಿಚಯಸ್ಥ ಅಭ್ಯರ್ಥಿಯಿಂದ 60 ಲಕ್ಷ ರೂ. ಕೊಡಿಸಿ ಹುದ್ದೆಗೆ ಅಕ್ರಮವಾಗಿ ಆಯ್ಕೆಯಾಗುವಂತೆ ಮಾಡಿದ್ದ. ಇದಕ್ಕೆಂದು ಆತ ಕಮಿಷನ್ ಸಹ ಪಡೆದಿದ್ದ.
ಈ ಬಗ್ಗೆ ಮಾಹಿತಿ ಖಚಿತ ಪಡಿಸಿಕೊಳ್ಳಲು ಹರೀಶ್ಗೆ ನೋಟಿಸ್ ನೀಡಲಾಗಿತ್ತು. ಆದರೆ, ಆತ ವಿಚಾರಣೆಗೆ ಬಂದಿರಲಿಲ್ಲ. ಇದೀಗ ಆತನನ್ನು ಬಂಧಿಸಲಾಗಿದ್ದು, ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕಿದೆ ಎಂದೂ ಮೂಲಗಳು ತಿಳಿಸಿವೆ.