ಮನೆ ಸುದ್ದಿ ಜಾಲ ಮಂಡ್ಯ: ಮಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕಿ ಸಾವು: ತನಿಖೆಗೆ ಡಿಸಿ ಆದೇಶ

ಮಂಡ್ಯ: ಮಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕಿ ಸಾವು: ತನಿಖೆಗೆ ಡಿಸಿ ಆದೇಶ

0

ಮಂಡ್ಯ: ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ 7 ವರ್ಷದ ಬಾಲಕಿ ಸಾನ್ವಿ ಮೃತಪಟ್ಟಿದ್ದಾಳೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಐವರು ವೈದ್ಯರನ್ನೊಳಗೊಂಡ ತನಿಖಾ ತಂಡವನ್ನು ರಚಿಸಿ ತನಿಖೆಗೆ ಸರ್ಕಾರ ಆದೇಶಿಸಿದೆ.

ಈ ಸಂಬಂಧ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ಐವರು ವೈದ್ಯರನ್ನೊಳಗೊಂಡ ತನಿಖಾ ಸಮಿತಿಯನ್ನು ರಚಿಸಿ ತನಿಖೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ಬೆಳವಣಿಗೆಯು ರಾಜ್ಯದಲ್ಲಿ ವೈದ್ಯಕೀಯ ನಿರ್ವಹಣೆಯ ಗುಣಮಟ್ಟದ ಬಗ್ಗೆ ಗಂಭೀರ ಚರ್ಚೆ ಉಂಟುಮಾಡಿದೆ.

ಮಂಡ್ಯದ ಜನತೆಯಲ್ಲಿ ಆಕ್ರೋಶ ಉಂಟುಮಾಡಿದ ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ತಕ್ಷಣವೇ ಸ್ಪಂದನೆ ನೀಡಿದ್ದು, ಸಮಗ್ರವಾಗಿ ಪರಿಶೀಲಿಸಲು ನುರಿತ ವೈದ್ಯರ ತಂಡವನ್ನು ನೇಮಕ ಮಾಡಲಾಗಿದೆ. ಮೈಸೂರು ಮೆಡಿಕಲ್ ಕಾಲೇಜಿನ ಹಿರಿಯ ವೈದ್ಯ ಡಾ. ಪ್ರದೀಪ್ ಅವರನ್ನು ಈ ತನಿಖಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಸದಸ್ಯರಾಗಿ ಡಾ. ಬಾಲಕೃಷ್ಣ, ಡಾ. ಚೇತನಾನಂದ, ಡಾ. ಮಹೇಶ್ ಹಾಗೂ ಡಾ. ಸೋಮಶೇಖರ್ ಅವರನ್ನು ಸೇರಿಸಲಾಗಿದೆ.

ಈ ತಂಡಕ್ಕೆ 15 ದಿನಗಳೊಳಗಾಗಿ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ತನಿಖೆಯಲ್ಲಿ ಬಾಲಕಿಗೆ ನೀಡಲಾದ ಚಿಕಿತ್ಸೆಯ ತಾತ್ವಿಕ ಪರಿಶೀಲನೆ, ಚಿಕಿತ್ಸಾ ಸಮಯ, ತುರ್ತು ಸೇವೆಗಳ ಲಭ್ಯತೆ, ವೈದ್ಯರ ಸ್ಪಂದನೆ ಮುಂತಾದ ಎಲ್ಲಾ ಅಂಶಗಳನ್ನು ಪರಿಗಣಿಸಲಾಗುವುದು.

ಬಾಲಕಿ ಸಾನ್ವಿಯ ಸಾವಿನ ಸುದ್ದಿ ಹರಡಿದ ನಂತರ, ಆಸ್ಪತ್ರೆಯ ಎದುರು ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. “ವೈದ್ಯರು ಸಮಯಕ್ಕೆ ಚಿಕಿತ್ಸೆ ನೀಡಿಲ್ಲ”, “ಆಸ್ಪತ್ರೆಯಲ್ಲಿನ ನಿರ್ಲಕ್ಷ್ಯವೇ ಸಾವಿಗೆ ಕಾರಣ” ಎಂಬ ಆರೋಪಗಳ ನಡುವೆ, ಇದೀಗ ವೈದ್ಯಕೀಯ ಸಮಿತಿಯ ತನಿಖೆಯಿಂದ ಸತ್ಯ ಬೆಳಕಿಗೆ ಬರಲಿದೆ ಎಂಬ ನಿರೀಕ್ಷೆ ಇದೆ.