ಮನೆ ರಾಜಕೀಯ ಧರ್ಮಸ್ಥಳ ಚಲೋ – ಬಿಜೆಪಿಯಿಂದ ಧರ್ಮಸ್ಥಳ ಯಾತ್ರೆ

ಧರ್ಮಸ್ಥಳ ಚಲೋ – ಬಿಜೆಪಿಯಿಂದ ಧರ್ಮಸ್ಥಳ ಯಾತ್ರೆ

0

ಬೆಂಗಳೂರು : ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ಆರೋಪಿಸಿ ಬಿಜೆಪಿ ಧರ್ಮಸ್ಥಳ ಚಲೋ ಮುಂದುವರಿಸಿದೆ. ಇಂದು ಜಯನಗರ, ಬಸವನಗುಡಿ, ಬಿಟಿಎಂ, ವಿಜಯನಗರ ಸೇರಿದಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಧರ್ಮಸ್ಥಳಕ್ಕೆ ಯಾತ್ರೆ ಕೈಗೊಳ್ಳಲಾಗಿದೆ.

ಮೊದಲು ಜಯನಗರ ಕ್ಷೇತ್ರದ ಶಾಸಕ ರಾಮಮೂರ್ತಿ ನೇತೃತ್ವದಲ್ಲಿ ಜಯನಗರ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಅಲ್ಲಿಂದ ನೇರವಾಗಿ ನೈಸ್ ರಸ್ತೆಯ ಪಿಇಎಸ್ ಕಾಲೇಜು ಬಳಿ ಉಳಿದ ಕ್ಷೇತ್ರದ ಜನ ಸೇರ್ಪಡೆಗೊಳ್ಳಲಿದ್ದಾರೆ.

ನಂತರ ಅಲ್ಲಿಂದ ಒಟ್ಟಾಗಿ ಬಿಜೆಪಿ ಶಾಸಕರು, ಸಂಸದರ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಯಾತ್ರೆ ಆರಂಭಗೊಳ್ಳಲಿದೆ. ಸುಮಾರು 400 ಕಾರುಗಳಲ್ಲಿ ಧರ್ಮಸ್ಥಳ ಯಾತ್ರೆ ಕೈಗೊಂಡಿದ್ದು, ಧರ್ಮಸ್ಥಳದಿಂದ ಒಂದು ಕಿಲೋಮೀಟರ್ ದೂರದಿಂದ ಪಾದಯಾತ್ರೆಯೊಂದಿಗೆ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.

ನೈಸ್ ರೋಡ್ ಟೋಲ್‌ನಿಂದ ಬಿಜೆಪಿ ಧರ್ಮಸ್ಥಳ ಯಾತ್ರೆ ಆರಂಭಗೊಳ್ಳಲಿದ್ದು, ಐದು ವಿಧಾನಸಭಾ ಕ್ಷೇತ್ರದಿಂದ ಯಾತ್ರೆ ಕೈಗೊಂಡಿದ್ದು, ನೂರಾರು ಕಾರುಗಳಲ್ಲಿ ಧರ್ಮಸ್ಥಳಕ್ಕೆ ತೆರಳಲು ತಯಾರಿ ನಡೆದಿದೆ. ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಮಣ್ಯರಿಂದ ಯಾತ್ರೆಗೆ ಚಾಲನೆ ಸಿಗಲಿದೆ. ಧರ್ಮಸ್ಥಳ ಯಾತ್ರೆ ಹಿನ್ನೆಲೆ ನೂರಾರು ಕಾರುಗಳು, ವಾಹನಗಳು ಟೋಲ್‌ಗೆ ಆಗಮಿಸಿವೆ ಎನ್ನಲಾಗಿದೆ.

ಧಾರ್ಮಿಕ ಧರ್ಮಸ್ಥಳದ ಬಗ್ಗೆ ಕುರಿತು ಮಾತನಾಡಿದ ಶಾಸಕ ಸಿ.ಕೆ. ರಾಮಮೂರ್ತಿ ಅವರು, ನಾವೆಲ್ಲರೂ ಧರ್ಮಸ್ಥಳಕ್ಕೆ ತೆರಳುತ್ತಿದ್ದೇವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಕೇರಳ, ದುಬೈಗಳಲ್ಲಿ ಕೇತ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ಸಹಿಸೋಕೆ ಆಗಲ್ಲ. ಈಗ ಸಿಕ್ಕಿಬಿದ್ದಿರುವವರು ಕೇವಲ ನಟರು. ಇದರ ಹಿಂದಿನ ಪ್ರೊಡ್ಯೂಸರ್‌ಗಳು ಹೊರಬರಬೇಕಿದೆ ಎಂದರು.

ಅಯ್ಯಪ್ಪ, ತಿರುಪತಿ ಆಯ್ತು ಈಗ ಧರ್ಮಸ್ಥಳದ ಸರದಿ, ಇದು ಒಪ್ಪುವಂತಹದ್ದಲ್ಲ. ಹಾಗಾಗಿ ಸಾವಿರಾರು ಸಂಖ್ಯೆಯಲ್ಲಿ ಧರ್ಮಸ್ಥಳಕ್ಕೆ ಹೋಗುತ್ತಿದ್ದೇವೆ. ಮುಂದೆ ಧರ್ಮಸ್ಥಳದಲ್ಲೇ ದೊಡ್ಡ ಧರ್ಮ ಸಮಾವೇಶ ಮಾಡುತ್ತೇವೆ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ವಾಪಸ್ ಬರುತ್ತೇವೆ. ಈ ಷಡ್ಯಂತ್ರ ವಿರುದ್ಧ ಎನ್‌ಐಎ ತನಿಖೆ ಆಗಬೇಕು ಎಂದು ಆಗ್ರಹಿಸಿದರು ಎಂದು ಹೇಳಲಾಗಿದೆ.