ಬೆಂಗಳೂರು : ನಿಮ್ಮ ಮನೆಗಳ ಬಳಿ ಪಿನ್, ಬಳೆ ಮಾರಾಟ, ಪಾತ್ರೆ ಮಾರಾಟ ಮಾಡುತ್ತೇವೆ ಎಂದು ಹೇಳಿಕೊಂಡು ಬರುವ ಮಹಿಳೆಯರನ್ನು ನೀವು ನೋಡಿರುತ್ತೀರಿ. ಇಂಥ ಮಹಿಳೆಯರ ಮೇಲೆ ಎಚ್ಚರ ಇರಲಿ. ಇಂಥ ವೃತ್ತಿ ಮಾಡುತ್ತಿದ್ದ ದಂಪತಿಯೊಂದು ಕಳ್ಳತನ ಮಾಡುವಾಗಲೇ ಕೆ.ಆರ್. ಪುರದ ದೇವಸಂದ್ರ ಬಳಿ ಸಾರ್ವಜನಿಕರಿಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ.
ತಲೆ ಕೂದಲು ಮತ್ತು ಬೊಂಬೆ ಮಾರಾಟದ ನೆಪದಲ್ಲಿ ಮಹಿಳೆಯರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಈ ದಂಪತಿಯಿಂದ 60 ಲಕ್ಷ ರೂ. ಮೌಲ್ಯದ 398 ಗ್ರಾಂ ಚಿನ್ನಾಭರಣವನ್ನು ಕೆ.ಆರ್. ಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಗಾಯತ್ರಿ ಮತ್ತು ಶ್ರೀಕಾಂತ್ ಎಂದು ಗುರುತಿಸಲಾಗಿದೆ.
ಮನೆಗಳು ಇರುವ ಜಾಗ, ಜಾತ್ರೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಈ ದಂಪತಿಗಳು ತಮ್ಮ ಕೃತ್ಯಗಳನ್ನು ಎಸಗುತ್ತಿದ್ದರು. ಪತ್ನಿ ಗಾಯತ್ರಿ ‘ತಲೆ ಕೂದಲಿಗೆ ಪಿನ್ ಕೊಡ್ತೀವಿ, ಪಾತ್ರೆ ಕೊಡ್ತೀವಿ’ ಎಂದು ಕೂದಲು ಮತ್ತು ಬೊಂಬೆ ವ್ಯಾಪಾರ ಮಾಡುವ ನೆಪದಲ್ಲಿ ಮಹಿಳೆಯರ ಬಳಿ ಹೋಗುತ್ತಿದ್ದಳು.ಈ ವೇಳೆ, ಪತಿ ಶ್ರೀಕಾಂತ್ ಮಹಿಳೆಯರ ಗಮನ ಬೇರೆಡೆ ಸೆಳೆದು ಅವರ ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದ.
ತಲೆ ಕೂದಲು ರೀ ಎಂದು ಹೇಳಿಕೊಂಡು ಯಾರಾದರೂ ನಿಮ್ಮ ಏರಿಯಾಗೆ ಬಂದರೆ ಎಚ್ಚರದಿಂದಿರುವಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಕೆ.ಆರ್. ಪುರ ಪೊಲೀಸರು ದಂಪತಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ವಶಪಡಿಸಿಕೊಂಡ ಚಿನ್ನಾಭರಣಗಳ ಮೂಲ ಮತ್ತು ಅವರು ಇನ್ನು ಯಾವೆಲ್ಲಾ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.















