ಬೆಂಗಳೂರು : ನೈಸ್ ಕಂಪನಿಗೆ ಟೌನ್ಶಿಪ್ ಮಾಡಲು ಅವಕಾಶ ಕೊಡಬಾರದು ಎಂದು ಕಾಂಗ್ರೆಸ್ ಸದಸ್ಯ ರಾಮೋಜಿಗೌಡ ಸರ್ಕಾರವನ್ನ ಒತ್ತಾಯ ಮಾಡಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆ ಕೇಳಿದ ಅವರು, 20193 ಎಕರೆ ನೈಸ್ ಪ್ರಾಜೆಕ್ಟ್ ಕೊಡಲಾಗಿದೆ.
ರೈತರಿಂದ ಕಡಿಮೆ ದರದಲ್ಲಿ ಜಮೀನು ಪಡೆಯಲಾಗಿದೆ. ಟೌನ್ಶಿಪ್ ಮಾಡ್ತೀನಿ ಅಂದರು ಇನ್ನು ಮಾಡಿಲ್ಲ. ರೈತರಿಗೆ ಜಮೀನಾದರೂ ವಾಪಸ್ ಕೊಡಬೇಕು. ಯಾವುದೇ ಕಾರಣಕ್ಕೂ ಟೌನ್ಶಿಪ್ ಮಾಡಲು ಅವಕಾಶ ಕೊಡಬಾರದು. ಟೂ ವೀಲರ್ಗೆ ಟೋಲ್ ಪಡೆಯದಂತೆ ಕ್ರಮ ಮಾಡಬೇಕು ಎಂದು ಆಗ್ರಹ ಮಾಡಿದರು.
ಇದಕ್ಕೆ ಸಚಿವ ಸತೀಶ್ ಜಾರಕಿಹೊಳಿ ಉತ್ತರ ನೀಡಿ, ನೈಸ್ ಟೌನ್ಶಿಪ್ ಬಗ್ಗೆ ನಿರ್ಧಾರ ಮಾಡಲು ಸಿಎಂ ಅವರು ಕ್ಯಾಬಿನೆಟ್ ಉಪಸಮಿತಿ ಮಾಡಿದ್ದಾರೆ. ಅವರ ವರದಿ ಬಂದ ಬಳಿಕ ಈ ಬಗ್ಗೆ ಕ್ರಮ ವಹಿಸಲಾಗುತ್ತೆ.
ನೈಸ್ ಅವರು ಸಣ್ಣಪುಟ್ಟ ತಕರಾರಿಗೂ ಕೋರ್ಟ್ ಮೊರೆ ಹೋಗುತ್ತಿದ್ದಾರೆ. ಅದನ್ನೂ ಪರಿಹರಿಸಬೇಕಿದೆ. ಉಪಸಮಿತಿ ವರದಿ ಬಂದ ಬಳಿಕ ಬೈಕ್ ಟೋಲ್ ರದ್ದು ಮಾಡೋ ಬಗ್ಗೆ ಚಿಂತನೆ ನಡೆಸುತ್ತೇವೆ. ಸಿಎಂ ಜೊತೆ ಈ ಬಗ್ಗೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.















