ಮನೆ ಅಪರಾಧ ಚಾಕು ಇರಿತಕ್ಕೆ ಒಳಗಾಗಿದ್ದ ಬಿಬಿಎಂಪಿ ಮಾಜಿ ಸದಸ್ಯ ಅಯೂಬ್ ಖಾನ್ ಸಾವು

ಚಾಕು ಇರಿತಕ್ಕೆ ಒಳಗಾಗಿದ್ದ ಬಿಬಿಎಂಪಿ ಮಾಜಿ ಸದಸ್ಯ ಅಯೂಬ್ ಖಾನ್ ಸಾವು

0

ಬೆಂಗಳೂರು(Bengaluru): ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಚಾಕು ಇರಿತಕ್ಕೊಳಗಾಗಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಅಯೂಬ್‌ ಖಾನ್ ಗುರುವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಚಾಮರಾಜಪೇಟೆ ಮನೆ ಬಳಿ ಅಯೂಬ್‌ ಖಾನ್‌ಗೆ ಬುಧವಾರ ಸಂಜೆ ಚಾಕುವಿನಿಂದ ಇರಿಯಲಾಗಿತ್ತು. ಕೂಡಲೇ ಅಯೂಬ್‌ ಅವರನ್ನು ಚಿಕಿತ್ಸೆಗೆ ಏಷ್ಯನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆಗೆ ಮಸೀದಿ ಅಧ್ಯಕ್ಷ ಪಟ್ಟವೇ ಕಾರಣ ಎಂದು ಆಯುಬ್ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಟಿಪ್ಪುನಗರದ ಖುದಾಯತ್ ಮಸೀದಿಗೆ ಆಯುಬ್ ಅಧ್ಯಕ್ಷರಾಗಿದ್ದರು. ಈ ಸ್ಥಾನ ಬಿಟ್ಟುಕೊಡುವಂತೆ ಆಯುಬ್ ಅಣ್ಣನ ಮಗ ಮತೀನ್ ಆಗಾಗ ಗಲಾಟೆ ಮಾಡುತ್ತಿದ್ದ. ಇದೇ ವಿಚಾರವಾಗಿ ಈ ಹಿಂದೆ ಕೊಲೆ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಹೇಳಿದ್ದಾರೆ.‌

ಬುಧವಾರ ಮತೀನ್, ನೀನು ಸತ್ತರೆ ನಾನು ಅಧ್ಯಕ್ಷ ಆಗಬಹುದು ಎಂದು ಆಯುಬ್​ಗೆ ಚಾಕು ಇರಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆರೋಪಿ ಬಂಧನಕ್ಕೆ ಚಾಮರಾಜಪೇಟೆ ಪೊಲೀಸರು ಬಲೆ ಬೀಸಿದ್ದಾರೆ.