ಮನೆ ಮನರಂಜನೆ ನಟ ದರ್ಶನ್ ಮೇಲೆ ಚಪ್ಪಲಿ ಎಸೆತ: ಘಟನೆ ಖಂಡಿಸಿದ ನಟ ಶಿವರಾಜ್ ಕುಮಾರ್

ನಟ ದರ್ಶನ್ ಮೇಲೆ ಚಪ್ಪಲಿ ಎಸೆತ: ಘಟನೆ ಖಂಡಿಸಿದ ನಟ ಶಿವರಾಜ್ ಕುಮಾರ್

0

ಹೊಸಪೇಟೆ(Hospete): ದರ್ಶನ್ ಅಭಿನಯದ ʼಕ್ರಾಂತಿʼ ಸಿನಿಮಾದ ಹಾಡು ಬಿಡುಗಡೆಯ ವೇಳೆ ಕಿಡಿಗೇಡಿಗಳು ನಟನ ಮೇಲೆ ಚಪ್ಪಲಿ ಎಸೆದಿರುವ ಘಟನೆ ಬಳ್ಳಾರಿಯ ಹೊಸಪೇಟೆಯಲ್ಲಿ ಭಾನುವಾರ  ನಡೆದಿದ್ದು, ಆಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟ ದರ್ಶನ್ ತೂಗದೀಪ ಅಭಿಯನದ ಬಹುನಿರೀಕ್ಷಿತ ಕ್ರಾಂತಿ ಚಿತ್ರದ “ಬೊಂಬೆ, ಬೊಂಬೆ’ ಆಡಿಯೋ ಬಿಡುಗಡೆ ಸಮಾರಂಭ ನಗರದ ವಾಲ್ಮೀಕಿ ವೃತ್ತದಲ್ಲಿ ಭಾನುವಾರ ರಾತ್ರಿ ನಡೆಯಿತು.

ದರ್ಶನ್ ಸೇರಿದಂತೆ ನಟರನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾವಣೆಗೊಂಡಿದ್ದರು. ಇದೇ ವೇಳೆ ಯಾರೋ ಕಿಡಿಗೇಡಿಗಳು ನಟ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದಿದ್ದಾರೆ.

ಅಭಿಮಾನದಿಂದ ಪ್ರೀತಿಯನ್ನು ತೋರಿ; ದ್ವೇಷ ಅಗೌರವವನ್ನಲ್ಲ : ನಟ ಶಿವರಾಜ್ ಕುಮಾರ್

ಸ್ಯಾಂಡಲ್‌ ವುಡ್‌ ನ ಹಿರಿಯ ನಟ ಶಿವರಾಜ್‌ ಕುಮಾರ್‌ ಅವರು ವಿಡಿಯೋ ಮಾಡಿ ದರ್ಶನ್‌ ಅವರ ಮೇಲೆ ನಡೆದ ಘಟನೆಯನ್ನು ಖಂಡಿಸಿದ್ದಾರೆ.

ನಿನ್ನೆ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಕೃತ್ಯ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಈ ರೀತಿಯ ಅಮಾನವೀಯ ಘಟನೆ ಒಂದೇ ಮನೆಯವರಂತಿರುವ ಎಲ್ಲರಿಗೂ ನೋವುಂಟು ಮಾಡುತ್ತದೆ. ಮನುಷ್ಯತ್ವ ಮರೆತು ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದು ವಿನಂತಿಸುತ್ತೇನೆ. ಅಭಿಮಾನದಿಂದ ಪ್ರೀತಿಯನ್ನು ತೋರಿ; ದ್ವೇಷ ಅಗೌರವವನ್ನಲ್ಲ ಎಂದಿದ್ದಾರೆ.

ಘಟನೆ ಖಂಡಿಸಿದ ಧನ್ವೀರ್: ನಟ ಧನ್ವೀರ್ ಅವರು ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹಾಕಿಕೊಂಡಿದ್ದಾರೆ.

“ನಿನ್ನೆ ಹೊಸಪೇಟೆಯಲ್ಲಿ ನಡೆದ ಘಟನೆ ತುಂಬಾ ನೋವುಂಟು ಮಾಡಿದೆ. ನಿಮ್ಮ ಮೇಲೆ ನಡೆದಿರುವ ಪಿತೂರಿ ಖಂಡನೀಯ. ನಿಮ್ಮ ಸಹಸ್ರ ಅಭಿಮಾನಿಗಳಲ್ಲಿ ಒಬ್ಬನಾಗಿ ಸಾಯೋವರೆಗೂ ನಿಮ್ಮ ಮೇಲಿನ ಅಭಿಮಾನ ದುಪ್ಪಟ್ಟಾಗುತ್ತೆ ಹೊರತು ಕಡಿಮೆಯಾಗುವುದಿಲ್ಲ. ಈ ಘಟನೆಗೆ ಕಾರಣರಾದವರಿಗೆ ಭಗವಂತ ಒಳ್ಳೆಯದೇ ಮಾಡಲಿ. ಕೆಟ್ಟದು ಬಯಸಿದವರಿಗೂ ಒಳ್ಳೆದು ಮಾಡಿ ಎಂದು ಹೇಳಿಕೊಟ್ಟಿದ್ದಿರಾ ಬಾಸ್. ಕರ್ಮ ಎನ್ನುವುದು ಯಾರಿಗೂ ಬಿಟ್ಟಿರುವುದಿಲ್ಲ, ಕರ್ಮ ತಿರುಗುತ್ತೆ. ಚಪ್ಪಲಿ ಎಸೆದ ವ್ಯಕ್ತಿಗೂ, ಅವನ ಮನಸ್ಥಿತಿಗೂ ಮತ್ತು ಪ್ರಚೋದಿಸಿದರವರಿಗೂ ನೆಮ್ಮದಿ ಸಿಗಲಿ. ನಿಮ್ಮ ಸೆಲೆಬ್ರಿಟಿ ಅಭಿಮಾನಿಗಳ ಮುಂದೆ ಈ ಘಟನೆಗಳು ಸಾಸಿವೆ ಕಾಳಿಗೆ ಸಮ. ನಿಮ್ಮ ಮೇಲಿನ ಅಭಿಮಾನದೊಂದಿಗೆ.. ಧನ್ವೀರ್, ನಿಮ್ಮೊಂದಿಗೆ ಸದಾ ನಾವು” ಎಂದು ಬರೆದುಕೊಂಡಿದ್ದಾರೆ.