ಮಡಿಕೇರಿ: ಕೊಡಗಿನ ವಿವಿಧೆಡೆ ಶುಕ್ರವಾರ ವರ್ಷದ ಮೊದಲ ಮಳೆ ಸುರಿದಿದ್ದು, ಬಿಸಿಲಿನ ಜಳಕ್ಕೆ ತತ್ತರಿಸಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ.
ಮಧ್ಯಾಹ್ನ 3.30ರ ಸುಮಾರಿಗೆ ಆರಂಭವಾದ ಮಳೆಯು ನಾಪೋಕ್ಲು, ತಣ್ಣಿಮಾನಿ, ಸುಂಟಿಕೊಪ್ಪ, ಭಾಗಮಂಡಲ, ತಲಕಾವೇರಿ ಭಾಗದಲ್ಲಿ ಸ್ವಲ್ಪ ಸಮಯ ಜೋರಾಗಿ ಸುರಿಯಿತು. ಗುಡುಗು, ಸಿಡಿಲಿನ ಆರ್ಭಟವೂ ಇತ್ತು. ಮಡಿಕೇರಿ, ತಾಳತ್ತಮನೆ, ಮಾದಾಪುರ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ.
ಕಾಫಿ ಹೂವು ಮಾಡಲು ಬೆಳೆಗಾರರು ಮಳೆಯ ನಿರೀಕ್ಷೆಯಲ್ಲಿದ್ದರು. ಜಿಲ್ಲೆಯ ಕೆಲವು ಭಾಗದಲ್ಲಿ ಸುರಿದಿರುವ ಮಳೆಯು ಬೆಳೆಗಾರರ ಮೊಗದಲ್ಲಿ ನಗು ಮೂಡಿಸಿದೆ. ಮಾರ್ಚ್ನಲ್ಲಿ ಸುರಿಯುವ ಮಳೆಗೆ ‘ಹೂವಿನ ಮಳೆ’ ಎಂದೇ ಕಾಫಿ ಬೆಳೆಗಾರರು ಕರೆಯುತ್ತಾರೆ.