ಮನೆ ಸುದ್ದಿ ಜಾಲ ಚುನಾವಣೆ ನಿಯೋಜಿತ ತಂಡಗಳು ಚುನಾವಣಾ ಅಂಶಗಳನ್ನು ತಿಳಿದು ಕರ್ತವ್ಯ ನಿರ್ವಹಿಸಬೇಕು: ಕೆ.ಎಂ.ಗಾಯತ್ರಿ

ಚುನಾವಣೆ ನಿಯೋಜಿತ ತಂಡಗಳು ಚುನಾವಣಾ ಅಂಶಗಳನ್ನು ತಿಳಿದು ಕರ್ತವ್ಯ ನಿರ್ವಹಿಸಬೇಕು: ಕೆ.ಎಂ.ಗಾಯತ್ರಿ

0

ಮೈಸೂರು:  ಚುನಾವಣೆಗೆ ನಿಯೋಜಿತ ಅಧಿಕಾರಿಗಳು ಚುನಾವಣೆ ನಿಯಮಗಳನ್ನು ಅರಿತುಕೊಂಡು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತ್  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಗಳಾದ  ಕೆ.ಎಂ.ಗಾಯತ್ರಿ ಅವರು ತಿಳಿಸಿದರು.

Join Our Whatsapp Group

ತಿ ನರಸೀಪುರ  ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಚುನಾವಣೆ ಸಂಬಂಧಿಸಿದಂತೆ ಸ್ಥಿರ ಕಣ್ಗಾವಲು ತಂಡ(ಎಸ್‌ ಎಸ್‌ ಟಿ), ಕ್ಷಿಪ್ರ ಕ್ರಿಯಾ ತಂಡ(ಎಫ್‌ ಎಸ್‌ ಟಿ) ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ನಡೆದ ಚುನಾವಣೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಚುನಾವಣಾ ಸಮಯದಲ್ಲಿ ಒಬ್ಬ ವ್ಯಕ್ತಿ ರೂ. 50 ಸಾವಿರ ಗಳನ್ನು ಮಾತ್ರ ಕೊಂಡೊಯ್ಯಲು ಅವಕಾಶವಿದೆ. ಅದರ ಹೊರತಾಗಿ, ದಾಖಲೆ ರಹಿತ ವಶಪಡಿಸಿಕೊಂಡ ರೂ. 50 ಸಾವಿರ ಗಳನ್ನು ಮೀರಿದ ಮೊತ್ತ ಹಾಗೂ ರೂ. 10 ಲಕ್ಷಗಳಿಗಿಂತ ಕಡಿಮೆ ಮೊತ್ತ ವನ್ನು ಜಿಲ್ಲಾ ಮಟ್ಟದ ಕ್ಯಾಶ್ ರಿಲೀಜ್ ಸಮಿತಿಗೆ ಕಳುಹಿಸತಕ್ಕದ್ದು, ದಾಖಲೆ ರಹಿತ ರೂ. 10 ಲಕ್ಷ ಮೀರಿದ ಮೊತ್ತದ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ನೀಡಬೇಕು.

ಮತದಾನ ಕೇಂದ್ರದಲ್ಲಿ ಹಿರಿಯ ನಾಗರೀಕರಿಗೆ ತಂಗುದಾಣ,ಕಾಯ್ದಿರಿಸಿದ ಕೊಠಡಿ ವ್ಯವಸ್ಥೆ ಮಾಡುವುದು ಹಾಗೂ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು.  ಮತದಾನ ಕೇಂದ್ರಕ್ಕೆ ಮತ ಚಲಾಯಿಸಲು ಬಂದವರಿಗೆ ಶುದ್ಧ ಕುಡಿಯುವ ನೀರಿನ ಜೊತೆಗೆ ಮತಗಟ್ಟೆಯಲ್ಲಿ ಮತಚಲಾಯಿಸಲು ಅನುಕೂಲಕರ ವಾತಾವರಣವನ್ನು ಸೃಷ್ಠಿಸುವಂತೆ ತಿಳಿಸಿದರು.

ಪ್ರಾಚ್ಯವಸ್ತು ಸಂಗ್ರಹಾಲಯದ ಆಯುಕ್ತರು ಹಾಗೂ ಮಾದರಿ ನೀತಿ ಸಂಹಿತೆ ಸದಸ್ಯರಾದ ದೇವರಾಜ್ ಅವರು ಮಾತನಾಡಿ, ಮತಗಟ್ಟೆ ವ್ಯಾಪ್ತಿಯಲ್ಲಿ ಬೂತ್ ಲೆವೆಲ್ ಅಧಿಕಾರಿಗಳಾದ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರ ಮಾಹಿತಿಯನ್ನು ಸಂಗ್ರಹಿಸಿ ಕೊಂಡು ಮತದಾರರ ಜಾಗೃತಿ ತಂಡ ರಚಿಸಿಕೊಂಡರೆ ಕರ್ತವ್ಯ ನಿರ್ವಹಿಸಲು ಸಹಕಾರಿಯಾಗಲಿದೆ ಎಂದರು.

ಅಭ್ಯರ್ಥಿಗಳು ಚುನಾವಣೆಗೆ 40 ಲಕ್ಷದವರೆಗೂ ಖರ್ಚು ಮಾಡಬಹುದಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಅಭ್ಯರ್ಥಿಗಳ ವೆಚ್ಚದ ಬಗ್ಗೆ ನಿಗಾವಹಿಸಬೇಕು. ಎಲ್ಲಾ ಸಭೆ, ಸಮಾರಂಭಗಳಿಗೆ   ಚುನಾವಣಾ ಅಧಿಕಾರಿಗಳು ಅನುಮತಿ ನೀಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಅಭ್ಯರ್ಥಿಗಳು ಅನುಮತಿ ಪಡೆದಿರುವ ವಾಹನಗಳ ಬಳಕೆಗಷ್ಟೆ ಅವಕಾಶ ನೀಡಬೇಕು. ಅನುಮತಿಯಿಲ್ಲದೇ ವಾಹನಗಳನ್ನು ಬಳಸಿದರೆ ಕೇಸ್ ದಾಖಲಿಸಿ,ವಶಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ, ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಎ.ಎನ್.ಸುಬ್ರಹ್ಮಣ್ಯ ಶರ್ಮ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.