ಮನೆ ರಾಜ್ಯ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಸಚಿವ ಮಧು ಬಂಗಾರಪ್ಪ ಅವರಿಗೆ ಎಸ್ ಎಫ್ ಐ ಮನವಿ

ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಸಚಿವ ಮಧು ಬಂಗಾರಪ್ಪ ಅವರಿಗೆ ಎಸ್ ಎಫ್ ಐ ಮನವಿ

0

ಬೆಂಗಳೂರು: ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಕ್ರಮವಹಿಸುವಂತೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಗೆ ಭಾರತ ವಿದ್ಯಾರ್ಥಿ ಫೆಡೆರೇಷನ್ (ಎಸ್.ಎಫ್.ಐ) ಕರ್ನಾಟಕ ರಾಜ್ಯ ಸಮಿತಿ ಮನವಿ ಮಾಡಿದೆ.

Join Our Whatsapp Group

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಕರ್ನಾಟಕ ರಾಜ್ಯ ಸಮಿತಿ ಪರವಾಗಿ ರಾಜ್ಯ ನಿಯೋಗ ಬೆಂಗಳೂರಿನ  ಅವರ ನಿವಾಸದಲ್ಲಿ ಭೇಟಿ ಮಾಡಿ ಮನವಿ ಪತ್ರ ನೀಡಿ ಸಮಸ್ಯೆಗಳ ಪರಿಹಾರಕ್ಕಾಗಿ ಚರ್ಚಿಸಲಾಯಿತು.

ಮನವಿಗೆ ಸ್ಪಂದಿಸಿದ ಸಚಿವರು ಸಮಸ್ಯೆಗಳ ಕುರಿತು ಚರ್ಚಿಸಲು ಅಧಿಕಾರಿಗಳನ್ನು ಕರೆದು ನಿಮ್ಮೊಂದಿಗೆ ಸಭೆ ಮಾಡುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಅನೇಕ ಸರಕಾರಿ ಶಾಲಾ ಕಾಲೇಜುಗಳಲ್ಲಿ ಈಗಲೂ ಅನೇಕ ಮೂಲಭೂತ ಸೌಲಭ್ಯಗಳ ಕೊರತೆ ಇರುತ್ತದೆ. ಸರ್ಕಾರಿ ಶಾಲಾ-ಕಾಲೇಜುಗಳ ಸುಧಾರಣೆಗಾಗಿ ಕೋಠಾರಿ ಆಯೋಗ ಸೇರಿದಂತೆ ಅನೇಕ ಶಿಕ್ಷಣ ತಜ್ಞರು, ಶಿಕ್ಷಕರು, ಉಪನ್ಯಾಸಕರು, ಸಾಹಿತಿಗಳು, ವಿದ್ಯಾರ್ಥಿ ಸಂಘಟನೆಗಳು, ರಾಜಕೀಯ ಮುತ್ಸದ್ಧಿಗಳು, ಪ್ರಗತಿಪರರು ಶ್ರಮಿಸಿದ್ದಾರೆ. ಆದರೂ ಸಹ ನಮಗೆ ಸ್ವಾತಂತ್ರ ಸಿಕ್ಕು 75 ವರ್ಷಗಳು ಕಳೆದರು ನಮ್ಮ ರಾಜ್ಯದ ಗ್ರಾಮೀಣ ಪ್ರದೇಶ, ಕೊಳಚೆ ಪ್ರದೇಶಗಳು, ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಇರುವಂತಹ ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗದೇ ಇರುವುದು ಒಂದು ಕಡೆಯಾದರೆ, ಕೊರೋನ ಮತ್ತು ಕೊರೋನ ನಂತರದಲ್ಲಿ ಶೈಕ್ಷಣಿಕ ರಂಗದಲ್ಲಿ ಸಾಕಷ್ಟು ಸಮಸ್ಯೆಗಳನ್ನು ವಿದ್ಯಾರ್ಥಿಗಳು ದಿನನಿತ್ಯ ಅನುಭವಿಸುತ್ತಿದ್ದಾರೆ. ಆದ್ದರಿಂದ ಸದರಿ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದ್ದಾರೆ.

ಬೇಡಿಕೆಗಳೇನು?

8 ನೇಯ ತರಗತಿಯ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಸೈಕಲ್‌ ವಿತರಿಸಲು ಸರ್ಕಾರ ಕ್ರಮವಹಿಸಬೇಕು.

ಡೊನೇಶನ್ ಹಾವಳಿ ನಿಯಂತ್ರಣ ಮಾಡಲು ಜಿಲ್ಲಾಧಿಕಾರಿಗಳ ಅದ್ಯಕ್ಷತೆಯಲ್ಲಿರುವ ಡೇರಾ ಸಮಿತಿಯನ್ನು ಸಕ್ರಿಯಗೊಳಿಸಿ ಎಲ್ಲಾ ಜಿಲ್ಲೆಗಳಲ್ಲಿ ಸಭೆ ಮಾಡಲು ಸೂಚನೆ ನೀಡಿ ಡೊನೇಶನ್ ಹಾವಳಿಯನ್ನು ನಿಲ್ಲಿಸಬೇಕು.

ರಾಜ್ಯದ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಮೂಲಭೂತ ಸೌಲಭ್ಯಗಳಾದ ಶುದ್ಧ ಕುಡಿಯುವ ನೀರು, ಶೌಚಾಲಯಗಳು, ವಿದ್ಯಾರ್ಥಿಗಳ ಡೆಸ್ಕ್ ಗಳು ಒದಗಿಸಬೇಕು.

ಸ್ವಂತ ಕಟ್ಟಡಗಳು, ಈಗಾಗಲೇ ಇರುವ ಕಟ್ಟಡಗಳ ಇರುವ ಕಟ್ಟಡಗಳ ದುರಸ್ತಿ, ಗ್ರಂಥಾಲಯ ಕೊಠಡಿ, ಭೋಜನಾಲಯ ಕೊಠಡಿ ಹಾಗೂ ಎಲ್ಲಾ ಶಾಲಾ-ಕಾಲೇಜುಗಳಿಗೆ ಕಾಂಪೌಂಡ್ ವ್ಯವಸ್ಥೆಯನ್ನು ಖಾತ್ರಿ ಪಡಿಸಬೇಕು.

ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಎಲ್ಲಾ ಹಂತದ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರ ಹುದ್ದೆಗಳು ಭರ್ತಿಗೆ ಕ್ರಮವಹಿಸಿ.

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ‘ಡಿ’ ಗ್ರೂಪ್ ಹುದ್ದೆಗಳು ಹಾಗೂ ರಂಗ ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡಬೇಕು.

ಕೊರೋನ ಸಮಯದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಅವರನ್ನು ಮರಳಿ ಶಾಲೆಗೆ ಕರೆದುಕೊಂಡು ಬರುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಜಾರಿ ಮಾಡಬೇಕು.

ಸರ್ಕಾರಿ ಶಾಲೆಗಳನ್ನು ಕಿರಿಯ ಪ್ರಾಥಮಿಕದಿಂದ ಹಿರಿಯ ಪ್ರಾಥಮಿಕಕ್ಕೆ ಮೇಲ್ದರ್ಜೆಗೆ ಏರಿಸಲು ಇರುವ ಸಮಸ್ಯೆಗಳನ್ನು ಪರಿಹರಿಸಬೇಕು.

ಆರ್.ಟಿ.ಇ ನಿಯಮಗಳನ್ನು ಎಲ್ಲಾ ಶಾಲೆಗಳಲ್ಲಿ ಸಮರ್ಪಕವಾಗಿ ಜಾರಿಗೊಳಿಸಲು ಆದೇಶ ಮಾಡಬೇಕು.

ಸರ್ಕಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ಬಹುತೇಕ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ನೋಟ್ ಬುಕ್ ಬಟ್ಟೆ ಮಾರಾಟ ಮಾಡುವಂತಹ ಶಾಲೆಗಳ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು.

ರಾಜ್ಯದಲ್ಲಿ ಅನಧೀಕೃತವಾಗಿವಾಗಿರುವ ಐಸಿಎಸ್‌ ಇ ಹಾಗೂ ಸಿಬಿಎಸ್‌ ಇ ಶಾಲೆಗಳ ಮೇಲೆಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

ಈ ಮೇಲಿನ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಅಮರೇಶ ಕಡಗದ, ರಾಜ್ಯ ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವರಹಾಳ, ರಾಜ್ಯ ಪಧಾದಿಕಾರಿಗಳಾದ ಗಣೇಶ ರಾಠೋಡ್, ಬಸವರಾಜ ಬೋವಿ, ವಿಜಯ ಕುಮಾರ ಹಾಗೂ ವಿಶ್ವನಾಥ  ಇದ್ದರು.