ಮನೆ ರಾಜಕೀಯ ಯುವಕನ ಕೊಲೆ ಪ್ರಕರಣ: ದಲಿತ ಯುವಕ ಎಂದ ಸಚಿವರು, ಹಿಂದೂ ಯುವಕ ಎಂದು ಹೇಳಲಿಲ್ಲ ಏಕೆ?:...

ಯುವಕನ ಕೊಲೆ ಪ್ರಕರಣ: ದಲಿತ ಯುವಕ ಎಂದ ಸಚಿವರು, ಹಿಂದೂ ಯುವಕ ಎಂದು ಹೇಳಲಿಲ್ಲ ಏಕೆ?: ಹೆಚ್ ಡಿಕೆ

0

ಮೈಸೂರು: ಬೆಂಗಳೂರಿನ ಗೌರಿಪಾಳ್ಯದಲ್ಲಿ ಯುವಕನ ಕೊಲೆಯ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ನೀಡಿರುವ ಹೇಳಿಕೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದಿಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; “ಗೃಹ ಸಚಿವರು ತಮ್ಮ ಜವಾಬ್ದಾರಿ ಮರೆತಿದ್ದಾರೆ. ಚುಚ್ಚಿಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಪ್ರಚೋದಾನಾತ್ಮಕ ಹೇಳಿಕೆ ನೀಡಿದ್ದಾರೆ. ಗೃಹ ಸಚಿವರೇ ಹೀಗೆ ಹೇಳಿಕೆ ಕೊಟ್ಟರೆ ಹೇಗೆ? ಅರೆಬರೆ ಮಾಹಿತಿ ಇಟ್ಟುಕೊಂಡು ಅತ್ಯಂತ ಬೇಜವಾಬ್ದಾರಿಯಿಂದ ಅವರು ಹೇಳಿಕೆ ನೀಡಿದ್ದಾರೆ” ಎಂದು ಕಟುವಾಗಿ ಟೀಕಿಸಿದರು.

ಈ ಹತ್ಯೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಬಂಧಿಸಿ ಕಠಿಣ ಸೆಕ್ಷನ್‌ʼಗಳನ್ನು ಹಾಕಿ ಶಿಕ್ಷೆಯಾಗುವಂತೆ ಮಾಡಬೇಕು. ಅದನ್ನು ಹೊರತುಪಡಿಸಿ ಅದನ್ನು ವಿವಾದವನ್ನಾಗಿ ಪರಿವರ್ತಿಸುವ ಹುನ್ನಾರ  ಮಾಡುವುದು ಬೇಡ ಎಂದು ಅವರು ಒತ್ತಾಯ ಮಾಡಿದರು.

ಕೊಲೆಯಾದ ಯುವಕನ್ನು ʼದಲಿತ ಯುವಕʼ ಎಂದು ಕರೆದ ಗೃಹ ಸಚಿವರು, ಎಲ್ಲಿಯೂ ಆತನನ್ನು ʼಹಿಂದೂ ಯುವಕʼ ಎಂದು ಕರೆಯಲಿಲ್ಲ. ಇದು ಏನನ್ನು ಸೂಚಿಸುತ್ತದೆ? ದಲಿತ ಯುವಕ ಹಿಂದೂ ಅಲ್ಲವೇ? ಯಾಕೆ ಈ ತಾರತಮ್ಯ ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ಪ್ರತಿಯೊಂದು ವಿಚಾರವನ್ನು ಬಿಜೆಪಿಯವರು ರಾಜಕೀಕರಣಗೊಳಿಸುತ್ತಿದ್ದಾರೆ. ದಲಿತ ಯುವಕ ಕೊಲೆ ಆಗಿದ್ದಾನೆ ಎಂದು ಹೇಳುತ್ತಾ ಸಾಮರಸ್ಯಕ್ಕೆ ಧಕ್ಕೆ ತರುತ್ತಿದ್ದಾರೆ. ಪೋಲಿಸರು ಒಂದು ಹೇಳಿಕೆ ಕೊಟ್ಟರೆ, ಗೃಹ ಸಚಿವರು ಮತ್ತೊಂದು ಹೇಳಿಕೆ ಕೊಡುತ್ತಿದ್ದಾರೆ. ಯಾರ ಮಾತು ಸತ್ಯ? ಯಾರ ಮಾತು ಸುಳ್ಳು? ಜವಾಬ್ದಾರಿ ಸ್ಥಾನದಲ್ಲಿರುವ ಗೃಹ ಸಚಿವರು ಎಲ್ಲ ಮಾಹಿತಿಯನ್ನು ಪಡೆದುಕೊಂಡು ಮಾತನಾಡಬೇಕು. ಅದನ್ನು ಬಿಟ್ಟು ಹೊಣೆಗೇಡಿತನದಿಂದ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಅವರು ಇಲ್ಲಿ ಕಾಮಿಡಿ ಮಾಡಲು ಬಂದಿದ್ದಾರಾ? ಇಷ್ಟೆಲ್ಲ ನಡೆಯುತ್ತಿದ್ದರೂ ಮುಖ್ಯಮಂತ್ರಿ ಮೌನವಾಗಿರುವುದು ಸರಿಯಲ್ಲ ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.

ಮಾವು ವಿವಾದಕ್ಕೆ ಕಿಡಿ: ರಾಜ್ಯದಲ್ಲಿ ವರ್ಷಕ್ಕೆ 500 ಕೋಟಿ ರೂಪಾಯಿಗೂ ಹೆಚ್ಚು ಮಾವಿನ ವ್ಯವಹಾರ ನಡೆಯುತ್ತದೆ. ಮುಸ್ಲೀಮರಿಗೆ ಮಾರಬೇಡಿ ಎಂದು ರೈತರಿಗೆ ಹೇಳುವ ವಿಶ್ವ ಹಿಂದೂ ಪರಿಷತ್ʼನವರು ಬಂದು ರೈತರಿಂದ ಮಾವು ಖರೀದಿ ಮಾಡುತ್ತಾರಾ? ಮಾವು ನಂತರ ಹುಣಸೆ ಹಣ್ಣು ಖರೀದಿ ವಿಚಾರದಲ್ಲಿ ಕೂಡ ಖ್ಯಾತೆ ತೆಗೆಯುತ್ತಿದ್ದಾರೆ. ಹಾಗಾದರೆ, ಎಲ್ಲ ಕೃಷಿ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಇವರೇ ಕೊಳ್ಳಲಿ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.