ಮನೆ ಸ್ಥಳೀಯ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಶ್ರೇಷ್ಠ ವ್ಯಕ್ತಿ ಬ್ರಹ್ಮಶ್ರೀ ನಾರಾಯಣ ಗುರುಗಳು – ಡಾ.ಹೆಚ್ ಸಿ...

ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಶ್ರೇಷ್ಠ ವ್ಯಕ್ತಿ ಬ್ರಹ್ಮಶ್ರೀ ನಾರಾಯಣ ಗುರುಗಳು – ಡಾ.ಹೆಚ್ ಸಿ ಮಹದೇವಪ್ಪ

0

ಮೈಸೂರು:- ದೇಶ ಸೇವೆಯೇ ಈಶನ ಸೇವೆ ಎಂದು ನಂಬಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಶ್ರೇಷ್ಠ ವ್ಯಕ್ತಿ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪನವರು ತಿಳಿಸಿದರು.

Join Our Whatsapp Group

ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಸಮಿತಿ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳ 169 ನೇ ಜನ್ಮ ದಿನೋತ್ಸವ ಇಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಇದಕ್ಕೆ ಕಾರಣ ಅಂದು ಬಂಧನದಲ್ಲಿದ್ದ ಸಾಮಾಜಿಕ ವ್ಯವಸ್ಥೆಯನ್ನ ಬಿಡಿಸುವಲ್ಲಿ ನಾರಾಯಣ ಗುರುಗಳ ಸ್ಥಾನ ಪ್ರಮುಖವಾದದ್ದು. 1854 ರಲ್ಲಿ ದಕ್ಷಿಣ ಭಾರತದ ಕೇರಳದ ತಿರುಗುನಂತಪುರದಿಂದ 12 ಕಿಲೋಮೀಟರ್ ದೂರದಲ್ಲಿರುವ ಒಂದು ಹಳ್ಳಿಯಲ್ಲಿ ಕೃಷಿಕ ಸಮಾಜದಲ್ಲಿ ನಾರಾಯಣ ಗುರುಗಳು ಜನಿಸಿದರು.  ತಂದೆ ಪಾಡನ್ ಹಾಸನ್ ತಾಯಿ ಕುಟ್ಟಿಯಮ್ಮ.  ತಂದೆ ಪುರಾಣ ರಾಮಾಯಣ ಮಹಾಭಾರತದ ಕಥೆಗಳನ್ನು ಹೇಳುವುದರಲ್ಲಿ ನಿಪುಣರಾಗಿದ್ದು ಸಂಸ್ಕೃತದಲ್ಲಿ ಪಾಂಡಿತ್ಯವನ್ನು ಪಡೆದುಕೊಂಡಿದ್ದರು. ಆ ಕಾಲದಲ್ಲಿಯೇ ಕೇರಳದಲ್ಲಿ ಜಾತಿ ವ್ಯವಸ್ಥೆ ತುಂಬಿ ತುಳುಕುತ್ತಿತ್ತು. ಅಸ್ಪೃಶ್ಯರು ಹಿಂದುಳಿದವರು ದೇವಸ್ಥಾನಕ್ಕೆ ಪ್ರವೇಶಿಸುವಂತಿರಲಿಲ್ಲ ದೇವರ ಹೆಸರಿನಲ್ಲಿ ಪ್ರಾಣಿಹತ್ಯೆ ನಡೆಯುತ್ತಿತ್ತು ಇದನ್ನು ನಾರಾಯಣ ಗುರುಗಳು ತೀವ್ರವಾಗಿ ಖಂಡಿಸುತ್ತಿದ್ದರು ಎಂದು ತಿಳಿಸಿದರು.

ಹಿಂದೆ ಕೇರಳದಲ್ಲಿ ಮಹಿಳೆಯರು ರಸ್ತೆಯಲ್ಲಿ ಸಂಚರಿಸುವಾಗ ಅವರ ಪರಿಸ್ಥಿತಿ ಹೀನಾಯವಾಗಿತ್ತು. ಇಂತಹ ಪರಿಸ್ಥಿತಿಯನ್ನು ಕಂಡ ನಾರಾಯಣ ಗುರುಗಳು ತುಳಿತಕ್ಕೊಳಗಾದವರ ಪರ ಧನಿಯೆತ್ತುತ್ತಿದ್ದರು. ಜೊತೆಗೆ ಅಂದಿಗೆ 60 ದೇವಸ್ಥಾನಗಳನ್ನು ಕಟ್ಟಿದರು. ತಮಿಳಿನಲ್ಲಿ ಹಲವಾರು ಪುಸ್ತಕಗಳನ್ನು ಬರೆದರು.  ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯಬೇಕು. ಆರ್ಥಿಕವಾಗಿ ಎಲ್ಲರೂ ಸಬಲರಾಗಬೇಕು. ಇದನ್ನೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡ ವಾದಿಸಿದ್ದು. ಶಿಕ್ಷಣ, ಸಂಘಟನೆ, ಹೋರಾಟ ನಮ್ಮನ್ನು ಬಲಗೊಳಿಸುವುದಕ್ಕೆ ಪ್ರೇರಣಾ ಶಕ್ತಿಗಳಾಗಿವೆ ಎಂದು ತಿಳಿಸಿದರು.

ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ವಿವಿಧ ಜನಾಂಗದವರನ್ನು ಸಂಘಟಿಸಿ ಶೋಷಿತರ, ಮಹಿಳೆಯರ ಪರ ಜ್ಯೋತಿ ಭಾಪುಲೆ, ಪೆರಿಯಾರ್, ಬಸವಣ್ಣನಂತೆ ನಾರಾಯಣ ಗುರುಗಳು ಶ್ರಮಿಸಿದರು. ಸಮ ಸಮಾಜದ ನಿರ್ಮಾಣಕ್ಕೆ ಹಾಗೂ ಮಹಿಳೆಯರ ಘನತೆಯನ್ನು ಕಾಪಾಡುವಲ್ಲಿ ಇವರುಗಳು ಸಮಾಜದ ಸುಧಾರಕರಾಗಿ ಉಳಿದುಕೊಂಡರು.  ಕೇವಲ ದೀಪ ಬೆಳಗಿಸುವುದಕ್ಕೆ ಮಾತ್ರ ಕಾರ್ಯಕ್ರಮಗಳನ್ನು ಸೀಮಿತವಾಗಿರಿಸದೆ ನಮ್ಮ ಜವಾಬ್ದಾರಿಯನ್ನು ಅರಿತು ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ, ಕಾರ್ಯೋನ್ಮುಖರಾಗಬೇಕು. ಸಮ ಸಮಾಜದ ನಿರ್ಮಾಣಕ್ಕೆ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಕರೆ ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್ ಅವರು ಮಾತನಾಡಿ, ಕೇರಳದಲ್ಲಿ ಮಹಿಳೆಯರ ಪರಿಸ್ಥಿತಿ ಕೆಳಮಟ್ಟದಲ್ಲಿದ್ದಾಗ, ಕೆಳವರ್ಗದ ಜನರು ದೇವತೆಗಳನ್ನು ಪೂಜಿಸಲು ಸಹ ಅವಕಾಶವಿಲ್ಲದೆ ಮಾರಿ ಮಸಣಿಯರನ್ನು ಪೂಜಿಸಬೇಕಾದ ಸಂದರ್ಭದಲ್ಲಿ ಶೋಷಿತರ ಪರವಾಗಿ ದ್ವನಿಯೆತ್ತಿ, ಸಮಾಜದ ಸುಧಾರಣೆಗೆ ಶ್ರಮಿಸಿದವರಲ್ಲಿ ನಾರಾಯಣ ಗುರುಗಳು ಪ್ರಮುಖರು ಎಂದರು.

ಅಂದಿಗೆ ಕೇರಳದಲ್ಲಿ ನಾರಾಯಣ ಗುರುಗಳನ್ನು ಬಸವಣ್ಣ ಎನ್ನುತ್ತಿದ್ದರು. ಒಂದೇ ಜಾತಿ  ಎಂದು ನಂಬಿದ್ದ ಅವರು ವಸು ದೈವ ಕುಟುಂಬಕಂ ಎಂಬ ಆಶಯವನ್ನು ಹೊಂದಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿಯವರು ನಾರಾಯಣ ಗುರುಗಳನ್ನು ಭೇಟಿ ಮಾಡಿದಾಗ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಸ್ವಾತಂತ್ರ್ಯ ದೊರೆಯದಿದ್ದರೆ ದೇಶ ಸುರಕ್ಷಿತವಾಗಿ ಇರುವುದಿಲ್ಲ ಎಂದು ಹೇಳಿದ್ದರು. ಹಿಂದುಳಿದ ವರ್ಗವನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪಾತ್ರ ಮಹತ್ವದ್ದು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಮಮತೇಶ್ ಕಡೂರ್ ಅವರು ಮಾತನಾಡಿ, ನಾಡಿನಾದ್ಯಂತ ನಾರಾಯಣ ಗುರುಗಳ ಜಯಂತಿ ಆಚರಣೆಗೆ ಪ್ರಸ್ತುತ ಸರ್ಕಾರ ಕಾರಣ. ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ನಾರಾಯಣ ಗುರುಗಳ ವಿಚಾರಧಾರೆಗಳು ತಲುಪಬೇಕು. ಈಗಾಗಲೇ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು 19 ಕೃತಿಗಳು ಬಿಡುಗಡೆಯಾಗಿವೆ.  ಸುಖ ಲೌಕಿಕ ಭೋಗದ ಜೀವನವನ್ನು ಬದಿಗಿಟ್ಟು ಕೇರಳದಲ್ಲಿ ಇದ್ದ ಅಂದಿನ ಅಮಾನವೀಯ ಪರಿಸ್ಥಿತಿಯನ್ನ ಬದಲಿಸಲು ಶ್ರಮಿಸಿದ ನಾರಾಯಣ ಗುರುಗಳ ಕೆಲವು ಆಶಯಗಳನ್ನು ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಡಾ. ಜಿ ರೂಪ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನಸ್ವಾಮಿ ಸಹಾಯಕ ನಿರ್ದೇಶಕರಾದ ಡಾ. ಎಂ ಡಿ ಸುದರ್ಶನ್, ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಸಂಘಟನೆಯ ಅಧ್ಯಕ್ಷರಾದ ಪೋತರಾಜು, ಮಹಿಳಾ ಸಂಘಟನೆಯ ಸರೋಜಮ್ಮ ಪಾಪೇಗೌಡ, ಯುವ ವೇದಿಕೆಯ ಅಧ್ಯಕ್ಷ ಸೋಮಶೇಖರ್ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸಮಾಜದ ಮುಖಂಡ ಹಾಗೂ ರಂಗ ಕರ್ಮಿ ರಾಜಶೇಖರ ಕದಂಬ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.