ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯಿದೆ- 1989ರ ಅಡಿಯಲ್ಲಿ ವ್ಯಕ್ತಿಯ ಜಾತಿ ಹೆಸರಿಸುವುದು ಅಪರಾಧವಲ್ಲ ಎನ್ನುವುದು ಅಪಾಯಕಾರಿಯಾಗುತ್ತದೆ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಹೇಳಿದೆ.
[ರಾಮರಾವ್ ರಾಥೋಡ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಸಂತ್ರಸ್ತರ ಜಾತಿಯನ್ನು ಉಲ್ಲೇಖಿಸಿ ಪದಗಳನ್ನು ಬಳಸಿದ್ದರೆ ಅದನ್ನು ಪ್ರಕರಣದ ಸಂಪೂರ್ಣ ಹಿನ್ನೆಲೆ ಮತ್ತು ಸಂದರ್ಭವನ್ನು ನೋಡಿ ಪರಿಗಣಿಸಬೇಕಾಗುತ್ತದೆ ಎಂದು ನ್ಯಾ. ಎನ್ ಜೆ ಜಾಮದಾರ್ ಅವರಿದ್ದ ಏಕಸದಸ್ಯ ಪೀಠ ಹೇಳಿತು.
“ಸಂತ್ರಸ್ತರ ಜಾತಿ ಅಥವಾ ಪಂಗಡ ಉಲ್ಲೇಖಿಸುವುದು ಕಾಯಿದೆಯ ಸೆಕ್ಷನ್ 3(1)(r) ಮತ್ತು 3(1) (ಎಸ್) ಅಡಿಯಲ್ಲಿ ಬರುವುದಿಲ್ಲ ಎಂದು ಒಟ್ಟಾರೆಯಾಗಿ ಕಾನೂನನ್ನು ಪ್ರತಿಪಾದಿಸುವುದು ಅಪಾಯಕಾರಿ” ಎಂಬುದಾಗಿ ಅದು ವಿವರಿಸಿದೆ.
ಎಸ್ಸಿ/ಎಸ್ಟಿ ಕಾಯಿದೆಯ ಸೆಕ್ಷನ್ 3(ಆರ್) ಮತ್ತು (ಎಸ್) ಅಡಿಯಲ್ಲಿ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ರಾಮರಾವ್ ರಾಥೋಡ್ ಎಂಬ ವ್ಯಕ್ತಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ರಾಮರಾವ್ ಪ್ರಕರಣದ ಸಂತ್ರಸ್ತೆಯನ್ನು ಆಕೆಯ ಜಾತಿ ಹಿಡಿದು ನಿಂದಿಸಿದ ಆರೋಪ ಎದುರಿಸುತ್ತಿದ್ದ. ಆತ ಜಾತಿ ಹಿಡಿದು ನಿಂದಿಸಿರುವುದನ್ನು ಮೂವರು ಸಾಕ್ಷಿದಾರರು ದೃಢೀಕರಿಸಿದ್ದರು. ಈ ಅಂಶಗಳನ್ನು ವಿಚಾರಣೆ ವೇಳೆ ನ್ಯಾಯಾಲಯ ಗಮನಿಸಿತು.
“ಕೇವಲ ಜಾತಿ ಹೆಸರಿಸಿದ್ದರೆ ಅದು ಕಾಯಿದೆಯಡಿ ಅಪರಾಧವಾಗದು” ಎಂಬ ಮೇಲ್ಮನವಿದಾರರ ಪರ ವಕೀಲರು ವಾದಿಸಿದರು. ಆದರೆ ಈ ವಾದ ಒಪ್ಪದ ನ್ಯಾಯಾಲಯ ಹೀಗೆ ಒಟ್ಟಾರೆಯಾಗಿ ಕಾನೂನನ್ನು ಪ್ರತಿಪಾದಿಸುವುದು ಅಪಾಯಕಾರಿ ಎಂದು ತಿಳಿಸಿ ಮೇಲ್ಮನವಿಯನ್ನು ವಜಾಗೊಳಿಸಿತು.