ಮನೆ ರಾಜ್ಯ ವೈವಿಧ್ಯಮಯ ಕನ್ನಡ ರಾಜ್ಯೋತ್ಸವ ಆಚರಣೆಗೆ ತೀರ್ಮಾನ: ಶಿವರಾಜ್ ತಂಗಡಗಿ  

ವೈವಿಧ್ಯಮಯ ಕನ್ನಡ ರಾಜ್ಯೋತ್ಸವ ಆಚರಣೆಗೆ ತೀರ್ಮಾನ: ಶಿವರಾಜ್ ತಂಗಡಗಿ  

0

ಬೆಂಗಳೂರು: ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಹೆಸರಿಟ್ಟು 50 ವರ್ಷ ಪೂರ್ಣಗೊಂಡ ನಿಮಿತ್ತ ಈ ಬಾರಿ ವೈವಿಧ್ಯಮಯವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಕನ್ನಡ-ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ  ತಿಳಿಸಿದರು.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ಈ ಬಾರಿ ವರ್ಷ ಪೂರ್ತಿ ವೈವಿಧ್ಯಮಯ ನಾಡಹಬ್ಬ ಆಚರಣೆಗೆ ತೀರ್ಮಾನ ಕೈಗೊಳ್ಳಲಾಗಿದೆ. ನವೆಂಬರ್ 1ರಿಂದ‌ ಮುಂದಿನ ವರ್ಷ ನವೆಂಬರ್ 30ರವರೆಗೆ ನಾಡಹಬ್ಬ ಆಚರಣೆ ಮಾಡಲಾಗುವುದು. ಕರ್ನಾಟಕದ‌ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು-ನುಡಿಗೆ ಸಂಬಂಧಿಸಿದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದರು.

ನವೆಂಬರ್ 1ರಂದು 5 ಕನ್ನಡ ಗೀತೆಗಳನ್ನು ಹಾಡಲಾಗುತ್ತದೆ. ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪು ಅವರ ಎಲ್ಲಾದರು ಇರು ಎಂತಾದರು ಇರು, ದರಾ ಬೇಂದ್ರೆ ಅವರ ಒಂದೇ ಒಂದೇ ಕರ್ನಾಟಕ ಒಂದೇ, ಸಿದ್ದಯ್ಯ ಪುರಾಣಿಕ್ ಅವರ ಹೊತ್ತಿತೋ ಹೊತ್ತಿತು ಕನ್ನಡದ ದೀಪ, ಚನ್ನವೀರ ಕಣವಿ ಅವರ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಗೀತ ಗಾಯನ ನಡೆಯಲಿದೆ ಎಂದು ಸಚಿವರು ತಿಳಿಸಿದರು.

ಅಂಚೆ‌ ಇಲಾಖೆಯ ಮೂಲಕ ವಿಶೇಷ ಅಂಚೆ ಚೀಟಿ ಹೊರ ತರಲು ಕೇಂದ್ರ ಸರ್ಕಾರಕ್ಕೆ‌ ಪತ್ರ ಬರೆಯಲಾಗುವುದು. ಕರ್ನಾಟಕದ ಏಕೀಕರಣದ ವಿಷಯ, ನಂತರ ಸಾಧನೆಗಳ‌ ಪಥ, ಐತಿಹಾಸಿಕ ನೆಲೆಗಳು ಸೇರಿದಂತೆ ಮುಂತಾದ ವಿಷಯಗಳ ಬಗ್ಗೆ ಸಾಕ್ಷ್ಯ ಚಿತ್ರ ರಚಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿರುವ ರಾಜ್ಯದ ‌ಏಕೈಕ ಭುವನೇಶ್ವರಿ ಪ್ರತಿಮೆ‌‌ ಜೀರ್ಣೋದ್ಧಾರ ಮಾಡಲಾಗುತ್ತದೆ. 50 ಸಾಧಕ‌ ಮಹಿಳೆಯರಿಗೆ ಸನ್ಮಾನ, ಕರ್ನಾಟಕ ಏಕೀಕರಣದಿಂದ ಇಲ್ಲಿಯವರೆಗಿನ ಸಮಗ್ರ ಸ್ಮರಣ‌ ಸಂಚಿಕೆ ಬಿಡುಗಡೆ, ಕಲೆ,‌ ಸಾಹಿತ್ಯ, ಜಾನಪದ,‌‌ ಸಂಸ್ಕೃತಿ ಕುರಿತು 50 ಪುಸ್ತಕ‌ ಬಿಡುಗಡೆ ಮಾಡಲಾಗುವುದು ಎಂದು ಶಿವರಾಜ್ ತಂಗಡಗಿ ಮಾಹಿತಿ ನೀಡಿದರು.

ಕೆಎಂಎಫ್ ಸಹಯೋಗದಲ್ಲಿ 50ರ ನೆನಪಿಗೆ ‘ಕರ್ನಾಟಕ ಪಾಕ್’ ಖಾದ್ಯ ಬಿಡುಗಡೆಗೆ ಚಿಂತನೆ ನಡೆಸಲಾಗಿದೆ ಎಂದೂ ತಿಳಿಸಿದರು.

ಹಲ್ಮಿಡಿ‌ ಶಾಸನದ‌ ಪ್ರತಿಕೃತಿಗಳ ಸ್ಥಾಪನೆ

ರಾಜ್ಯದ 31 ಜಿಲ್ಲೆಗಳಲ್ಲಿ ಹಲ್ಮಿಡಿ‌ ಶಾಸನದ‌ ಪ್ರತಿಕೃತಿಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಕರ್ನಾಟಕ‌ ಶಿಲ್ಪಕಲಾ ಅಕಾಡೆಮಿಯಿಂದ‌ ಶಿಲಾ ಫಲಕಗಳನ್ನು ತಯಾರಿಸಲಾಗುತ್ತದೆ. ಕರ್ನಾಟಕ‌ ಶಾಶ್ವತ ನಿಧಿ ತೆರೆಯಲಾಗುವುದು. ಸದರಿ ನಿಧಿಯಿಂದ ಸಂಗ್ರಹವಾದ ಅನುದಾನವನ್ನು ಗಡಿನಾಡು ಶಾಲೆಗಳ ಅಭಿವೃದ್ಧಿ ಮುಂತಾದ ಕನ್ನಡ ಚಟುವಟಿಕೆಗಳಿಗೆ ಬಳಕೆ ಮಾಡಲಾಗುವುದು. ಸರ್ಕಾರದ ಲೆಟರ್ ಹೆಡ್​​​ ನಲ್ಲಿ ‘ಕರ್ನಾಟಕ ಸಂಭ್ರಮ – 50’ ಎಂಬ ಲೋಗೋ ಇರಲಿದೆ. ನವೆಂಬರ್ ಅಂತ್ಯದೊಳಗೆ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರ ನೇಮಕ ಮಾಡಲಾಗುತ್ತದೆ ಎಂದು ಅವರು ಹೇಳಿದರು.