ಮನೆ ಅಪರಾಧ ಹಾಸನ: ಪತ್ನಿಯನ್ನು ಕೊಂದು ಹೂತು ಹಾಕಿದ್ದ ಪತಿಯ ಬಂಧನ

ಹಾಸನ: ಪತ್ನಿಯನ್ನು ಕೊಂದು ಹೂತು ಹಾಕಿದ್ದ ಪತಿಯ ಬಂಧನ

0

ಹಾಸನ: ಸಕಲೇಶಪುರ ತಾಲ್ಲೂಕಿನ ಬಾಗೆ ಗ್ರಾಮದ ಬಳಿ ಪತ್ತೆಯಾಗಿದ್ದ ಮಹಿಳೆ ಅಸ್ಥಿಪಂಜರ ಪ್ರಕರಣವನ್ನು ಭೇದಿಸಿರುವ ಸಕಲೇಶಪುರ ಪೊಲೀಸರು, ಮೂರು ತಿಂಗಳ ಹಿಂದೆ ಪತಿಯೇ ತನ್ನ ಪತ್ನಿಯನ್ನು ಕೊಂದು ಹೂತು ಹಾಕಿರುವುದನ್ನು ಪತ್ತೆ ಮಾಡಿದ್ದಾರೆ.

ಗ್ರಾಮದ ಶಾಂತಿವಾಸು (29) ಕೊಲೆಯಾದ ಮಹಿಳೆ. ಆಕೆಯ ಪತಿ, ಆರೋಪಿ ಪವನ್ ಕುಮಾರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿಯ ನಡುವೆ ಜಗಳ ನಡೆದಿದ್ದು, ಜಗಳದ ವೇಳೆ ಪತ್ನಿಯ ಮೇಲೆ ಪತಿ ಪವನ್ ಕುಮಾರ್ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಮನೆಯಲ್ಲಿಯೇ ಶಾಂತಿವಾಸು ಮೃತಪಟ್ಟಿದ್ದರು.

ಯಾರಿಗೂ ವಿಷಯ ತಿಳಿಯಬಾರದು ಎಂದು ಮನೆಯ ಬಳಿ ಇರುವ ಹಳ್ಳದ ಪಕ್ಕ ಗುಂಡಿ ತೆಗೆದು ಶವವನ್ನು ಹೂತು ಹಾಕಿದ್ದ. ಗುರುವಾರ ನಾಯಿಗಳು ಮೃತದೇಹದ ಮೂಳೆಗಳನ್ನು ಎಳೆದು ತಂದಿದ್ದು, ಮಹಿಳೆಯ ಅಸ್ಥಿ ಪಂಜರ ಪತ್ತೆಯಾಗಿತ್ತು. ಇದನ್ನು ಗಮನಿಸಿದ ತೋಟದ ಮಾಲೀಕ ಶ್ರೀನಿವಾಸ, ಸಕಲೇಶಪುರ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಶಾಂತಿವಾಸು ಹಾಗೂ ಪವನ್ ಕುಮಾರ್ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಪವನ್ ಪೇಂಟಿಂಗ್ ಕೆಲಸ ಮಾಡುತ್ತಿದ್ದ. ಪತ್ನಿಯ ಕೊಲೆ ಮಾಡಿ ಹೂತು ಹಾಕಿದ ನಂತರ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿಗೆ ತೆರಳಿದ್ದ. ತನ್ನ ಪತ್ನಿ ಕಳೆದು ಹೋಗಿದ್ದಾಳೆ ಎಂದು ಪವನ್ ಹಾಗೂ ಶಾಂತಿವಾಸು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.