ಮನೆ ಅಪರಾಧ ಪಾಂಡವಪುರ: ಪೂಜೆಗೆ ತೆರಳಿದ್ದ ಮಹಿಳೆಯ ಕೊಲೆ

ಪಾಂಡವಪುರ: ಪೂಜೆಗೆ ತೆರಳಿದ್ದ ಮಹಿಳೆಯ ಕೊಲೆ

0

ಪಾಂಡವಪುರ:ಕಾರ್ತಿಕ ಮಾಸದ ಪೂಜೆಗೆ ತೆರಳಿದ್ದ ಮಹಿಳೆಯೊಬ್ಬರನ್ನು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಎಲೆಕೆರೆ ಗ್ರಾಮದ ವಿ.ನಾಲೆಯ ಬಳಿ ಸೋಮವಾರ ಮಧ್ಯರಾತ್ರಿ ನಡೆದಿದೆ.


ಗ್ರಾಮದ ಲೇ.ಸ್ವಾಮಿಗೌಡ ಅವರ ಪತ್ನಿ ಪಾರ್ವತಮ್ಮ (55) ಕೊಲೆಯಾಗಿರುವ ಮಹಿಳೆಯಾಗಿದ್ದು,ಘಟನೆಗೆ ಮೃತರ ಪುತ್ರಿಯ ಅನೈತಿಕ ಸಂಬಂಧವೇ ಕಾರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕಡೆ ಕಾರ್ತಿಕ ಸೋಮವಾರ ಹಿನ್ನೆಲೆಯಲ್ಲಿ ಮೃತ ಮಹಿಳೆ ಪಾರ್ವತಮ್ಮ, ಪುತ್ರಿ ಅರ್ಪಿತ ಇಬ್ಬರು ಗ್ರಾಮದ ಈಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ, ಬಳಿಕ ಕಾವೇರಿ ಮಾತೆಗೆ ಪೂಜೆ ಸಲ್ಲಿಸಲು ವಿ.ನಾಲೆಯ ಬಳಿ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ವ್ಯಕ್ತಿಯೊಬ್ಬ ಪಾರ್ವತಮ್ಮ ಅವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಮುಂದೆ ಹೋಗುತ್ತಿದ್ದ ಮಗಳು ಅರ್ಪಿತ ತಾಯಿಯ ಕಿರುಚಾಟ ಕೇಳಿ ಬಂದು ನೋಡಿದಾಗ ಪಾರ್ವತಮ್ಮನಿಗೆ ಚಾಕುವಿನಿಂದ ಇರಿದಿರುವುದು ಕಂಡು ಬಂದಿದೆ. ತಕ್ಷಣ ಸ್ಥಳೀಯರ ಸಹಾಯದಿಂದ ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಂಗಳವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನೈತಿಕ ಸಂಬಂಧ ಶಂಕೆ:ಮೃತ ಪಾರ್ವತಮ್ಮ ಅವರ ಪುತ್ರಿ ಅರ್ಪಿತ ಅವರ ಅನೈತಿಕ ಸಂಬಂಧವೇ ಅವರ ತಾಯಿಯ ಕೊಲೆಗೆ ಕಾರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ಅರ್ಪಿತ ಅವರನ್ನು ಕಟ್ಟೇರಿ ಗ್ರಾಮದ ವ್ಯಕ್ತಿಯೊಬ್ಬರಿಗೆ ವಿವಾಹ ಮಾಡಿಕೊಡಲಾಗಿತ್ತು.ಆದರೆ, ಅರ್ಪಿತಾ ಗಂಡನನ್ನು ಬಿಟ್ಟು ತಾಯಿಯೊಂದಿಗೆಯೇ ವಾಸವಿದ್ದರು ಎನ್ನಲಾಗಿದೆ.ಅರ್ಪಿತಾ ಇನ್ನೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು,ಅವರೇ ಈ ಕೃತ್ಯವೆಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.