ಮನೆ ಸುದ್ದಿ ಜಾಲ ಮೈಸೂರು: ಮೇ 5 ರಿಂದ 8ರವರೆಗೆ ಆಯೋಧ್ಯಾ ಕಾಂಡ ಸಂಗೀತ ನಾಟಕ ಪ್ರದರ್ಶನ

ಮೈಸೂರು: ಮೇ 5 ರಿಂದ 8ರವರೆಗೆ ಆಯೋಧ್ಯಾ ಕಾಂಡ ಸಂಗೀತ ನಾಟಕ ಪ್ರದರ್ಶನ

0

ಮೈಸೂರು(Mysuru): ರಂಗಕರ್ಮಿ ಪ್ರಸನ್ನ ಕಟ್ಟಿರುವ ನೂತನ ರಂಗ ತಂಡದಿಂದ `ಅಯೋದ್ಯಾ ಕಾಂಡ’ ಸಂಗೀತ ನಾಟಕ ಪ್ರದರ್ಶನವು ಮೇ 5 ರಿಂದ 8ರವರೆಗೆ ವರೆಗೆ ಸಂಜೆ 7ಕ್ಕೆ ಕಲಾಮಂದಿರದ ಕಿರುರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

ನಾಟಕವನ್ನು ಪ್ರಸನ್ನ ನಿರ್ದೇಶಿಸಿದ್ದಾರೆ. ಮೇ 5ರಿಂದ 8ರ ಗಾನಭಾರತೀಯಲ್ಲೂ ನಾಟಕದ ವಾರಂತ್ಯದಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ.

‘ಕನ್ನಡ ರಂಗಭೂಮಿಯಲ್ಲಿ ಸಂಗೀತ ನಾಟಕ ಪ್ರಕಾರ ಹಿನ್ನೆಲೆಗೆ ಸರಿದಿದೆ. ಅದ‌ನ್ನು ಮತ್ತೆ ಜನಪ್ರಿಯಗೊಳಿಸುವುದಕ್ಕಾಗಿ ‘ನವೋದಯ’ ಆರಂಭಿಸಲಾಗಿದೆ. ರಾಮಾಯಣವನ್ನು ಆಧರಿಸಿದ ವೃತ್ತಿಪರ ಸಂಗೀತ ನಾಟಕವನ್ನು ಕಟ್ಟಬೇಕು ಎನ್ನುವ ಆಶಯದಲ್ಲೇ ಅಯೋಧ್ಯಾಕಾಂಡ ನಿರ್ಮಿಸಲಾಗಿದೆ‌’ ಎಂದು ಪ್ರಸನ್ನ ತಿಳಿಸಿದರು.

‘ಸಂಗೀತ ನಾಟಕ ಮರಾಠಿಯಲ್ಲಿ ಪ್ರಖ್ಯಾತವಾಗಿದೆ. ಕನ್ನಡದ ಯಕ್ಷಗಾನವನ್ನು ನೋಡಿದ ಸಾಂಗ್ಲಿ ಮಹಾರಾಜ ರಂಗಕರ್ಮಿಗಳನ್ನು ಕರೆಯಿಸಿ ಜನಪ್ರಿಯಗೊಳಿಸಿದರು. ಈ ಪ್ರಕಾರದ ಮೂಲನೆಲೆಯಾದ ಕನ್ನಡದಲ್ಲಿ ಮತ್ತೆ ಮುನ್ನೆಲೆಗೆ ತರಲು ‘ನವೋದಯ’ ಮುಂದಾಗಿದೆ’ ಎಂದರು.

‘ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ – ಸಮನ್ವಯ ಸಿದ್ಧಾಂತದ ಮೂಲಕ ಪರಂಪರೆಯ ದುರ್ಗುಣಗಳನ್ನು ತಿರಸ್ಕರಿಸಿ ನವೋದಯ ಚಳವಳಿ ಕಟ್ಟಿದರು. ಕುವೆಂಪು ಅವರು ರಾಮಾಯಣವನ್ನು ರಾಮಾಯಣ ದರ್ಶನವಾಗಿ ಮಾಡಿದರು. ನವೋದಯ ತಂಡವು ಅದೇ ಆಶಯದಲ್ಲಿ ಕೆಲಸ ಮಾಡಲಿದೆ’ ಎಂದು ತಿಳಿಸಿದರು.

ಸಾಂಸ್ಕೃತಿಕ ಮೈಸೂರು ಯೋಗನಗರಿ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ. ಕಂಪನಿ ನಾಟಕಗಳಿಗೆ ಪ್ರೋತ್ಸಾಹ ಸಿಕ್ಕಿದ್ದು ಇಲ್ಲಿಯೇ, ಮತ್ತೆ ರಂಗಭೂಮಿ ಗಟ್ಟಿಗೊಳಿಸಬೇಕು. ರಂಗ ಚಳವಳಿ ರೂಪುಗೊಳ್ಳಬೇಕು. ಹೀಗಾಗಿಯೇ ರಾಮಾಯಣ ಆಧರಿಸಿ ಸಂಗೀತ ನಾಟಕಗಳನ್ನು ಕಟ್ಟಲಾಗಿದೆ. ಪ್ರತಿಭಾನ್ವಿತ ತಂಡವು ರೂಪುಗೊಂಡಿದೆ’ ಎಂದು ಹೇಳಿದರು.

‘ಸದ್ಯ ಅಯೋಧ್ಯಾಕಾಂಡ ಸಂಗೀತ ನಾಟಕ ಪ್ರಸ್ತುತ ಪಡಿಸಲಿದ್ದು, ಅರಣ್ಯಕಾಂಡ, ಸುಂದರಕಾಂಡ ಇದೇ ವರ್ಷದಲ್ಲಿ ಪ್ರದರ್ಶನಗೊಳ್ಳಲಿವೆ. ನಗರದಲ್ಲಿ ರಂಗ ತರಬೇತಿಗೆ ಶಾಲೆಗಳು ಇವೆ. ಆದರೆ, ಪ್ರಾಥಮಿಕ ಹಂತದ ನಟನೆಯನ್ನು ಹೇಳಿಕೊಡುತ್ತಿವೆ. ಹೀಗಾಗಿ ‘ಆ್ಯಕ್ಟಿಂಗ್ ಶಾಸ್ತ್ರ’ ಹೆಸರಿನಲ್ಲಿ ಸಮಗ್ರ ರಂಗಭೂಮಿ ಅರಿಯುವ ಶಾಲೆ ಅಥವಾ ಶಿಬಿರ ರೂಪಿಸಲಾಗುವುದು’ ಎಂದು ಮಾಹಿತಿ ನೀಡಿದರು.