ಮೈಸೂರು(Mysuru): ಶಾಲೆಯಲ್ಲಿ ನೀತಿ ಶಿಕ್ಷಣವಾಗಿ ಭಗವದ್ಗೀತೆಯನ್ನು ಬೋಧಿಸಲು ಮುಂದಾಗಿದ್ದು, ಗೀತೆಯಂತೆ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಮಕ್ಕಳಿಗೆ ಪರಿಚಯಿಸಲಿ ಪರಿಚಯಿಸಲಿ’ ಎಂದು ಕಾಂಗ್ರೆಸ್ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್ ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೀತೆ ಧಾರ್ಮಿಕ ಗ್ರಂಥವೆಂದು ಎ.ಎಲ್.ಬಾಷಂ ಸೇರಿದಂತೆ ಇತಿಹಾಸಕಾರರು ಪ್ರತಿಪಾದಿಸಿದ್ದಾರೆ. ಒಂದೇ ಧರ್ಮ ನಮ್ಮನ್ನು ಆಳುವಂತಾದರೆ ಅದು ಶೋಚನೀಯ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು. ಇಂದು ವಿವೇಕರನ್ನು ಆರ್ಎಸ್ಎಸ್, ಬಿಜೆಪಿ ಮರೆತಿದೆ ಎಂದು ಹೇಳಿದರು.
ಎಲ್ಲ ಧರ್ಮಗಳಲ್ಲೂ ನೀತಿಪಾಠಗಳಿವೆ. ಗೀತೆಯನ್ನು ಮಾತ್ರ ಪರಿಚಯಿಸಿದರೆ ಅದು ಸಲ್ಲ. ಈ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಿ.ಟಿ.ರವಿ ಸೇರಿದಂತೆ ಬಿಜೆಪಿ ಮುಖಂಡರನ್ನು ಮುಕ್ತ ಸಂವಾದಕ್ಕೆ ಆಹ್ವಾನಿಸುತ್ತೇನೆ ಎಂದು ತಿಳಿಸಿದರು.
ಹಿಂದುತ್ವದ ಕಾರ್ಯಸೂಚಿಯನ್ನು ಜಾರಿಗೆ ತರುವುದಕ್ಕಾಗಿ ಇತಿಹಾಸವನ್ನು ತಿರುಚಲು ಆರ್ಎಸ್ಎಸ್ ಮುಂದಾಗಿದೆ. ಶಿಕ್ಷಣದಲ್ಲಿ ಧಾರ್ಮಿಕತೆ ಹೇರಲಾಗುತ್ತಿದೆ. ಸಮವಸ್ತ್ರ, ಹಿಜಾಬ್ ನೆಪದಲ್ಲಿ ಕೋಮು ಧ್ರುವೀಕರಣ ಮಾಡಲಾಗಿದೆ. ಜಾತ್ರೆಗಳಲ್ಲಿ ಬಡ ಮುಸ್ಲಿಮರನ್ನು ಗುರಿ ಮಾಡಿ ದ್ವೇಷ ಹರಡಲಾಗಿದೆ. ಸರ್ಕಾರಕ್ಕೆ ಕಣ್ಣು– ಕಿವಿ ಇಲ್ಲವಾಗಿದೆ ಎಂದು ಟೀಕಿಸಿದರು.