ಮನೆ ಸುದ್ದಿ ಜಾಲ ದ್ವೇಷ ರಾಜಕಾರಣಕ್ಕೆ ಕರ್ನಾಟಕ ಪ್ರಯೋಗಶಾಲೆ: ನ್ಯಾ.ಕೆ.ಚಂದ್ರು ಬೇಸರ

ದ್ವೇಷ ರಾಜಕಾರಣಕ್ಕೆ ಕರ್ನಾಟಕ ಪ್ರಯೋಗಶಾಲೆ: ನ್ಯಾ.ಕೆ.ಚಂದ್ರು ಬೇಸರ

0

ಮೈಸೂರು(Mysuru): ದ್ವೇಷ ರಾಜಕಾರಣಕ್ಕೆ ಕರ್ನಾಟಕ ಪ್ರಯೋಗಶಾಲೆಯಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಅವುಗಳನ್ನು ನಿಭಾಯಿಸುವಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ವಿಫಲಗೊಂಡಿವೆ  ಎಂದು ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಚಂದ್ರು ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಜೆಎಸ್‌ಎಸ್‌ ಕಾನೂನುಕಾಲೇಜಿನಲ್ಲಿ ಶುಕ್ರವಾರ ವಿಶೇಷ ಉಪನ್ಯಾಸ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹಿಜಾಬ್, ಹಲಾಲ್, ಆಜಾನ್‌ನಂತಹ ವಿಷಯಗಳು ಹೊಸದಲ್ಲ. ಮೊದಲಿನಿಂದಲೂ ಅವು ನಮ್ಮ ಜತೆಯಲ್ಲೇ ಇವೆ. ದಕ್ಷಿಣ ಭಾರತದ ಬೇರೆ ಯಾವುದೇ ರಾಜ್ಯಗಳಲ್ಲಿ ಕಾಣದ ವಿವಾದಗಳು ಕರ್ನಾಟಕದಲ್ಲಿ ನಡೆದಿವೆ ಎಂದು ಹೇಳಿದರು.

ದಿನೇ ದಿನೇ ಸಮಾಜದಲ್ಲಿ ಸಹಿಷ್ಣುತಾ ಭಾವನೆ ಕಡಿಮೆಯಾಗುತ್ತಿದೆ. ಪಾಕಿಸ್ತಾನ ಇಸ್ಲಾಂ ರಾಷ್ಟ್ರವಾದರೆ ಭಾರತ ಹಿಂದೂ ರಾಷ್ಟ್ರವಲ್ಲ. ಇದೊಂದು ಜಾತ್ಯತೀತ ದೇಶ. ಇಲ್ಲಿ ಒಂದು ಧರ್ಮ, ಒಂದು ಆಹಾರ ಪದ್ಧತಿ, ಒಂದು ಸಿದ್ಧಾಂತಗಳನ್ನು ಹೇರುವುದು ತಪ್ಪು. ಇಲ್ಲಿರುವ ಅತಿ ಕಡಿಮೆ ಸಂಖ್ಯೆಯ ಪಾರ್ಸಿ ಧರ್ಮದವರೂ ತಮ್ಮ ಧಾರ್ಮಿಕ ಆಚರಣೆಗಳನ್ನು ಮಾಡಲು ಸಂವಿಧಾನ ಮುಕ್ತ ಅವಕಾಶ ನೀಡಿದೆ ಎಂದು ಪ್ರತಿಪಾದಿಸಿದರು.
ತಮಿಳುನಾಡಿನ ಕಂಚಿಯ ಶಂಕರಮಠದ ಪಕ್ಕದಲ್ಲೇ ಇರುವ ಮಸೀದಿಯಿಂದ ನಿತ್ಯ ಆಜಾನ್‌ ಕೇಳಿ ಬರುತ್ತಿದೆ. ಅಲ್ಲಿ ಯಾವುದೇ ಸಮಸ್ಯೆಯೂ ಇಲ್ಲ, ವಿವಾದವೂ ಇಲ್ಲ. ಕರ್ನಾಟಕದಲ್ಲಿ ಮಾತ್ರ ಬೇಕಿರದ ಇಂತಹ ವಿಷಯಗಳೇ ಮುನ್ನೆಲೆಗೆ ಬರುತ್ತಿವೆ. ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯಲಾಗುತ್ತಿದೆ’ ಎಂದರು.

‘ಜೈ ಭೀಮ್’ ಸಿನಿಮಾ ನಿರ್ಮಾಪಕರು ಹಾಗೂ ನಟರ ವಿರುದ್ಧ ಪ್ರಕರಣ ದಾಖಲಾಗಿದೆ. ಬಹುಶಃ ಇದು ಹಣ ಕೀಳಲೆಂದೋ, ಪ್ರಸಿದ್ಧಿ ಪಡೆಯಲೆಂದೋ ಯಾವುದೋ ಸಂಘಟನೆ ದೂರು ನೀಡಿರುವಂತಿದೆ. ಪ್ರತಿ ಸಿನಿಮಾದಲ್ಲೂ ಏನಾದರೂ ಒಂದು ವಿವಾದ ಇರುತ್ತದೆ. ತನಿಖೆಯಲ್ಲಿ ಸತ್ಯಾಂಶ ಗೊತ್ತಾಗಲಿದೆ’ ಎಂದರು.