ಮೈಸೂರು(Mysuru): ಪಾರಂಪರಿಕ ನಗರಿ ಎಂದೇ ಖ್ಯಾತವಾಗಿರುವ ಮೈಸೂರು ನಗರದಲ್ಲಿ ಮತ್ತೊಂದು ಪಾರಂಪರಿಕ ಕಟ್ಟಡ ನೆಲಕಚ್ಚಿದೆ.
ನಗರದ ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆ ಕಟ್ಟಡದ ಮೇಲ್ಚಾವಣಿ ಕುಸಿದಿದ್ದು, ಅದೃಷ್ಟವಶಾತ್ ಮೂವರು ಸಾರ್ವಜನಿಕರು ಅಪಾಯದಿಂದ ಪಾರಾಗಿದ್ದಾರೆ. ನಿರಂತರ ಮಳೆಯುಂದಾಗಿ ವಾಣಿವಿಲಾಸ ರಸ್ತೆ ಭಾಗದ ಬಸ್ ನಿಲ್ದಾಣದ ಹಿಂಭಾಗದ ಕಟ್ಟಡದ ಮೇಲ್ಚಾವಣಿ ಕುಸಿದಿದೆ.
ಸುಮಾರು 95ವರ್ಷದ ಹಳೆದ ಕಟ್ಟಡವಾಗಿದ್ದು, 1927ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಈ ಮಾರುಕಟ್ಟೆ ನಿರ್ಮಾಣವಾಗಿತ್ತು. ಆದರೆ ಸೂಕ್ತ ನಿರ್ವಹಣೆ ಇಲ್ಲದೇ ಹಲವು ಭಾಗಗಳಲ್ಲಿ ಕುಸಿದಿದೆ.
ಕಟ್ಟಡ ನಿರ್ವಹಣೆ ಮಾಡುವಲ್ಲಿ ಮೈಸೂರು ಮಹಾನಗರ ಪಾಲಿಕೆ ನಿರ್ಲಕ್ಷ್ಯ ವಹಿಸಿದ್ದು, ಇಂದು ಏಕಾಏಕಿ ಮಾರುಕಟ್ಟೆಯ ಅಂಗಡಿ ಮಳಿಗೆಗಳ ಮೇಲ್ಚಾವಣಿ ಕುಸಿದಿದೆ. ಇನ್ನು ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.