ಚಾಮರಾಜನಗರ: ಚುನಾವಣ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಸರಕಾರಿ ಕಚೇರಿಗಳಲ್ಲಿ ರಾಜಕೀಯ ಮುಖಂಡರ ಭೇಟಿ ನಡೆಯುವಂತಿಲ್ಲ. ಆದರೂ ನಗರದ ಪತ್ರಕರ್ತರ ಭವನದಲ್ಲಿ ನಿತ್ಯವೂ ರಾಜಕೀಯ ವ್ಯಕ್ತಿಗಳು ಸುದ್ದಿಗೋಷ್ಠಿ, ಸಂವಾದ ನಡೆಸುವ ಮೂಲಕ ಪತ್ರಕರ್ತರಿಗೆ ಆಮಿಷ ಒಡ್ಡುತ್ತಿದ್ದಾರೆ. ಆದ್ದರಿಂದ ಭವನವನ್ನು ಮುಚ್ಚಿ ವಾರ್ತಾ ಇಲಾಖೆ ಸುಪರ್ದಿಗೆ ಪಡೆಯುವಂತೆ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಯಾಗಿರುವ ಜಿ.ಪಂ. ಸಿಇಒ ಸೂಚನೆ ನೀಡಿದ್ದಾರೆ.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಸಂವಾದ ನಡೆಸಿ ಆಮಿಷ ಒಡ್ಡುವುದು, ಚುನಾವಣ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗುವಂತಿದೆ. ಆದ್ದರಿಂದ ಪತ್ರಕರ್ತರ ಭವನಕ್ಕೆ ಸಿಸಿ ಕೆಮರಾ ಅಳವಡಿಸಬೇಕು. ಪತ್ರಕರ್ತರ ಭವನವನ್ನು ನಿಮ್ಮ ಸುಪರ್ದಿಗೆ ಪಡೆಯಬೇಕು ಎಂದು ಎಚ್ಚರಿಕೆ ಪತ್ರದ ಮೂಲಕ ಜಿ.ಪಂ. ಸಿಇಒ ಆನಂದ್ಪ್ರಕಾಶ್ ಮೀನಾ ಸೂಚನೆ ನೀಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆಯುವ ಸುದ್ದಿಗೋಷ್ಠಿ ಮತ್ತು ಸಂವಾದಗಳನ್ನು ರಾಜಕೀಯ ಚಟುವಟಿಕೆಗಳು ಎಂದು ಜಿಲ್ಲಾ ಡಳಿತ ನೋಟಿಸ್ ನೀಡಿರುವುದು ಖಂಡನೀಯ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.














