ಮನೆ ರಾಷ್ಟ್ರೀಯ ಮೆಸೇಜ್ ಟ್ರೇಸ್ ಮಾಡಲು ಬಲವಂತಪಡಿಸಿದರೆ ಭಾರತವನ್ನೇ ತೊರೆಯಬೇಕಾಗುತ್ತೆ: ವಾಟ್ಸಾಪ್ ಎಚ್ಚರಿಕೆ

ಮೆಸೇಜ್ ಟ್ರೇಸ್ ಮಾಡಲು ಬಲವಂತಪಡಿಸಿದರೆ ಭಾರತವನ್ನೇ ತೊರೆಯಬೇಕಾಗುತ್ತೆ: ವಾಟ್ಸಾಪ್ ಎಚ್ಚರಿಕೆ

0

ನವದೆಹಲಿ : ಬಳಕೆದಾರರ ಗೌಪ್ಯತೆ ವಿಚಾರದಲ್ಲಿ ಆ್ಯಪಲ್ ಸಂಸ್ಥೆ ಬಹಳ ಕಟ್ಟುನಿಟ್ಟು. ವಾಟ್ಸಾಪ್ ಕೂಡ ಅದೇ ಪ್ರವೃತ್ತಿ ತೋರುತ್ತಿದೆ. ತನ್ನ ಪ್ಲಾಟ್ ​ಫಾರ್ಮ್ ​ನಲ್ಲಿ ಮೆಸೇಜ್​ಗಳನ್ನು ಟ್ರೇಸ್ ಮಾಡಲು ಬಲವಂತಪಡಿಸಿದರೆ ಭಾರತದಲ್ಲಿ ಸೇವೆ ನಿಲ್ಲಿಸಬೇಕಾಗುತ್ತದೆ ಎಂದು ವಾಟ್ಸಾಪ್ ಎಚ್ಚರಿಕೆ ನೀಡಿದೆ.

Join Our Whatsapp Group

ಮೊನ್ನೆಮೊನ್ನೆ ದೆಹಲಿ ಹೈಕೋರ್ಟ್​ ನಲ್ಲಿ ನಡೆದ ವಿಚಾರಣೆಯಲ್ಲಿ ತನ್ನ ನಿಲುವನ್ನು ವಾಟ್ಸಾಪ್ ನಿವೇದಿಸಿಕೊಂಡಿದೆ. ವಾಟ್ಸಾಪ್ ಬಳಕೆದಾರರಿಗೆ ತಮ್ಮ ಗೌಪ್ಯತೆ ಬಗ್ಗೆ ಭದ್ರತಾ ಭಾವನೆ ಇದೆ. ಅದರಲ್ಲಿರುವ ಎನ್​ಕ್ರಿಪ್ಷನ್​ಗಳು ಬಳಕೆದಾರರ ಸಂದೇಶದ ಗೌಪ್ಯತೆಗೆ ಕಾರಣವಾಗಿದೆ. ಈ ಎನ್​ಕ್ರಿಪ್ಷನ್ ವ್ಯವಸ್ಥೆಯನ್ನು ಸಡಿಲಗೊಳಿಸಿದರೆ ವಾಟ್ಸಾಪ್ ​ನ ವಿಶ್ವಾಸಾರ್ಹತೆ ಕಡಿಮೆ ಆಗುತ್ತದೆ ಎಂದು ವಾಟ್ಸಾನ್ ನ್ಯಾಯಾಲಯದ ಮುಂದೆ ವಿವರಣೆ ನೀಡಿದೆ.

ವಾಟ್ಸಾಪ್ ಅನ್ನು ಸೈಬರ್ ಕ್ರೈಮ್​ಗಳಿಗೆ ಬಳಸಲಾಗುತ್ತಿದೆ. ಸಮಾಜ ಘಾತುಕ ಶಕ್ತಿಗಳು ಪ್ರಚೋದನಕಾರಿ ಸಂಗತಿಗಳನ್ನು ವಾಟ್ಸಾಪ್ ಮೂಲಕ ಹಂಚಿಕೊಳ್ಳುತ್ತಿವೆ. ಹೀಗಾಗಿ, ಇಂಥ ಸಂದೇಶಗಳ ಮೂಲವನ್ನು ಪತ್ತೆ ಹಚ್ಚಲು ವಾಟ್ಸಾಪ್ ಸೇರಿದಂತೆ ಇತರ ಮೆಸೇಜಿಂಗ್ ಅಪ್ಲಿಕೇಶನ್​ಗಳು ನೆರವಾಗಬೇಕು ಎಂದು ಭಾರತ ಸರ್ಕಾರ ಹಲವು ಬಾರಿ ಒತ್ತಾಯ ಹಾಕುತ್ತಿದೆ. ವಾಟ್ಸಾಪ್​ ನಲ್ಲಿ ಪೋಸ್ಟ್ ಆಗುವ ಪ್ರತಿಯೊಂದು ಚ್ಯಾಟ್ ಎನ್​ಕ್ರಿಪ್ಟ್ ಆಗಿರುತ್ತದೆ. ಇದರ ಕೀ ವಾಟ್ಸಾಪ್​ಗೂ ಗೊತ್ತಿರುವುದಿಲ್ಲ. ಈ ವ್ಯವಸ್ಥೆಯನ್ನು ಸಡಿಲಗೊಳಿಸುವುದೆಂದರೆ ಬಳಕೆದಾರರಿಗೆ ವಾಟ್ಸಾಪ್ ಮೇಲಿನ ವಿಶ್ವಾಸ ಹೋಗಬಹುದು. ಭಾರತದ ಸಂವಿಧಾನದತ್ತವಾಗಿ ಸಿಗುವ ಗೌಪ್ಯತೆಯ ಉಲ್ಲಂಘನೆಯೂ ಆದಂತಾಗುತ್ತದೆ. ಈ ವಾದವನ್ನು ಮುಂದಿಟ್ಟುಕೊಂಡು ಭಾರತದ ಐಟಿ ನಿಯಮಗಳ ವಿರುದ್ಧ ನಿಲ್ಲಲು ವಾಟ್ಸಾಪ್ ನಿರ್ಧರಿಸಿದೆ.

ಭಾರತದಲ್ಲಿ 40 ಕೋಟಿ ಸಕ್ರಿಯ ವಾಟ್ಸಾಪ್ ಬಳಕೆದಾರರಿದ್ದಾರೆ. ಜಾಗತಿಕವಾಗಿ ಇರುವ ವಾಟ್ಸಾಪ್ ಬಳಕೆದಾರರಲ್ಲಿ ಹೆಚ್ಚಿನವರು ಭಾರತೀಯರಿದ್ದಾರೆ. ಅಲ್ಲದೇ ಭಾರತದಲ್ಲಿ ವಾಟ್ಸಾಪ್​ನಲ್ಲಿ ಯುಪಿಐ ಪೇಮೆಂಟ್ ಫೀಚರ್ ಕೂಡ ಇದೆ. ಅಷ್ಟು ಸುಲಭಕ್ಕೆ ವಾಟ್ಸಾಪ್ ಭಾರತದ ವ್ಯವಹಾರವನ್ನು ಬಂದ್ ಮಾಡುವುದಿಲ್ಲ.

ಭಾರತದಲ್ಲಿ ಮಾತ್ರವಲ್ಲ ಬೇರೆ ದೇಶಗಳಲ್ಲೂ ವಾಟ್ಸಾಪ್ ಈ ರೀತಿಯಾಗಿ ಮೆಸೇಜ್ ಟ್ರೇಸಿಂಗ್​ಗೆ ಒತ್ತಡಗಳನ್ನು ಎದುರಿಸುತ್ತಿದೆ. ಹಾಗೂ ಹೀಗೂ ಆ ಕಾನೂನುಗಳಿಗೆ ವಾಟ್ಸಾಪ್ ಪ್ರತಿರೋಧ ತೋರುತ್ತಾ ತನ್ನ ಗೌಪ್ಯತಾ ನೀತಿಯನ್ನು ಉಳಿಸಿಕೊಂಡು ಬರುತ್ತಿದೆ.