ಮನೆ ರಾಷ್ಟ್ರೀಯ ಉತ್ತರಾಖಂಡದ ಸಹಸ್ತ್ರ ತಾಲ್‌ ಚಾರಣ: ರಾಜ್ಯದ 9 ಮಂದಿ ಸಾವು, 13 ಜನರ ರಕ್ಷಣೆ

ಉತ್ತರಾಖಂಡದ ಸಹಸ್ತ್ರ ತಾಲ್‌ ಚಾರಣ: ರಾಜ್ಯದ 9 ಮಂದಿ ಸಾವು, 13 ಜನರ ರಕ್ಷಣೆ

0

ಬೆಂಗಳೂರು: ಉತ್ತರಾಖಂಡದ ಸಹಸ್ತ್ರ ತಾಲ್‌ ಚಾರಣಕ್ಕೆ ತೆರಳಿದ್ದ ರಾಜ್ಯದ 22 ಜನರ ಪೈಕಿ 13 ಜನರನ್ನು ರಕ್ಷಿಸಲಾಗಿದ್ದು, 9 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Join Our Whatsapp Group

ರಕ್ಷಣಾ ಕಾರ್ಯಾಚರಣೆಗೆ ಹವಾಮಾನ ವೈಪರೀತ್ಯದಿಂದಾಗಿ ಅಡ್ಡಿಯಾಗಿದೆ.

ಅಪಾಯಕ್ಕೆ ಸಿಲುಕಿದ್ದ ಚಾರಣಿಗರ ಪೈಕಿ ಐವರು ಮೃತಪಟ್ಟಿದ್ದು, ನಾಲ್ವರು ಕಣ್ಮರೆಯಾಗಿದ್ದಾರೆ ಎಂದು ನಿನ್ನೆ ಹೇಳಲಾಗಿತ್ತು. ಇದೀಗ ಕಣ್ಮರೆಯಾಗಿದ್ದವರೆಲ್ಲರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.

‌ರಾಜ್ಯದ ಚಾರಣಿಗರು ಅಪಾಯದಲ್ಲಿ ಸಿಲುಕಿರುವ ಮಾಹಿತಿ ಸಿಗುತ್ತಿದ್ದಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಡೆಹ್ರಾಡೂನ್‌ಗೆ ತೆರಳಿದ್ದಾರೆ. ರಕ್ಷಿಸಲಾಗಿರುವ ಚಾರಣಿಗರನ್ನು ಅವರು ಭೇಟಿಯಾಗಿದ್ದಾರೆ.

ಬುಧವಾರ ಬೆಳಿಗ್ಗೆ 5ಕ್ಕೆ ಆರಂಭವಾದ ಕಾರ್ಯಾಚರಣೆ ಮಧ್ಯಾಹ್ನ ನಿಲ್ಲಿಸಲಾಗಿದೆ.

ಹವಾಮಾನ ಪರಿಸ್ಥಿತಿಯು ರಕ್ಷಣಾ ಸಿಬ್ಬಂದಿಗೆ ಸವಾಲಾಯಿತು. ಶವಗಳನ್ನು ಹುಡುಕಲು ಶೀಘ್ರವೇ ಕಾರ್ಯಾಚರಣೆ ಪುನರಾರಂಭಿಸುತ್ತೇವೆ. ಶವಗಳನ್ನು ಬೆಂಗಳೂರಿಗೆ ಸಾಗಿಸಲು ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಬುಧವಾರ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, 36 ರಿಂದ 72 ವರ್ಷದವರು ಚಾರಣಿಗರ ಗುಂಪಿನಲ್ಲಿದ್ದರು. ಅತ್ಯಂತ ಹಿರಿಯ (72 ವರ್ಷದ) ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ.

ಚಾರಣಿಗರಾದ ಸೌಮ್ಯಾ ಕನಲೆ, ಸ್ಮೃತಿ ಡೊಲಸ್‌, ಶೀನಾ ಲಕ್ಷ್ಮಿ, ಎಸ್‌.ಶಿವಜ್ಯೋತಿ, ಅನಿಲ್‌ ಭಟ್ಟ, ಭರತ್‌ ಬೊಮ್ಮನಗೌಡರ್‌, ಮಧು ಕಿರಣ್‌ ರೆಡ್ಡಿ, ಬಿ.ಎಸ್‌. ಜಯಪ್ರಕಾಶ್‌, ಎಸ್‌. ಸುಧಾಕರ್‌, ಎಂ.ಕೆ. ವಿನಯ್, ವಿವೇಕ್‌ ಶ್ರೀಧರ್‌, ಎ. ನವೀನ್‌ ಹಾಗೂ ರಿತಿಕಾ ಜಿಂದಾಲ್‌ ಬದುಕುಳಿದವರು.

ಮೃತರನ್ನು, ಆಶಾ ಸುಧಾಕರ್‌, ಪದ್ಮನಾಭ ಕುಂದಾಪುರ ಕೃಷ್ಣಮೂರ್ತಿ, ಸಿಂಧೂ ವಕೇಕಲಂ, ಕೆ.ಎನ್. ವೆಂಕಟೇಶ ಪ್ರಸಾದ್‌, ಅನಿತಾ ಬಂಗಪ್ಪ, ಪದ್ಮಿನಿ ಹೆಗ್ಡೆ, ಚೈತ್ರಾ ಪ್ರಣೀತ್‌, ವಿನಾಯಕ್‌ ಮುಂಗುರ್ವಾಡಿ ಮತ್ತು ಸುಜಾಥಾ ಮುಂಗುರ್ವಾಡಿ ಎಂದು ಗುರುತಿಸಲಾಗಿದೆ.