ಮನೆ ರಾಜ್ಯ ಅಶುದ್ದ ನೀರು ಸೇವಿಸಿ ಬಂದೇ ಗ್ರಾಮದ ನಾಲ್ವರು ಸಾವು; ಗ್ರಾಮದಲ್ಲಿ ಬೀಡುಬಿಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು

ಅಶುದ್ದ ನೀರು ಸೇವಿಸಿ ಬಂದೇ ಗ್ರಾಮದ ನಾಲ್ವರು ಸಾವು; ಗ್ರಾಮದಲ್ಲಿ ಬೀಡುಬಿಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು

0

ಚಿಕ್ಕಬಳ್ಳಾಪುರ: ವಾಂತಿ ಭೇದಿಯಿಂದ ಬಳಲಿ ಒಂದೇ ಗ್ರಾಮದಲ್ಲಿ ನಾಲ್ಕು ಜನರು ಮೃತಪಟ್ಟಿದ್ದಾರೆ.

Join Our Whatsapp Group

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ವೀರಪಲ್ಲಿ ಗ್ರಾಮದಲ್ಲಿ ಕಳೆದ 15 ದಿನಗಳಲ್ಲಿ ನಾಲ್ಕು ಜನ ಮೃತಪಟ್ಟಿದ್ದು ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಶುದ್ದ ನೀರು ಕುಡಿದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಗ್ರಾಮದಲ್ಲಿ ಬೀಡುಬಿಟ್ಟಿದ್ದು ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

ವೀರಪಲ್ಲಿ ಗ್ರಾಮದಲ್ಲಿ ವಾಂತಿ ಭೇದಿಯಿಂದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡ್ತಿದ್ದಾರೆ. ಆರೋಗ್ಯ ಇಲಾಖೆ ವೀರಪಲ್ಲಿ ಗ್ರಾಮದಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದಿದೆ.

ಮೇ 19ರಂದು ಗಂಗಮ್ಮ(70), ಮೇ 21ರಂದು ಮುನಿನಾಗಮ್ಮ(70), ಮೇ 22ರಂದು ಲಕ್ಷ್ಮಮ್ಮ(70) ಹಾಗೂ ಜೂನ್ 05ರಂದು ನರಸಿಂಹಪ್ಪ(75) ವಾಂತಿ ಭೇದಿಯಿಂದ ಬಳಲಿ ಮೃತಪಟ್ಟಿದ್ದರು. ಗ್ರಾಮದ ಚರಂಡಿಗಳಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಕೆಯೇ ಕಾರಣ. ಬಹುತೇಕ ಕುಡಿಯುವ ನೀರಿನ ಪೈಪ್​ಗಳನ್ನು ಚರಂಡಿಯಲ್ಲೇ ಅಳವಡಿಸಲಾಗಿದೆ. ಗ್ರಾಮದಲ್ಲಿ ಸ್ವಚ್ಛತೆ, ನೈರ್ಮಲ್ಯ ಕಾಪಾಡ್ತಿಲ್ಲವೆಂದು ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಘಟನೆ ಸಂಬಂಧ ಮಾತನಾಡಿದ ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಎಸ್. ಮಹೇಶಕುಮಾರ್, ಗ್ರಾಮದಲ್ಲಿ ಬಹುತೇಕ ಕುಡಿಯುವ ನೀರಿನ ಪೈಪ್ ಗಳನ್ನು ಚರಂಡಿಯಲ್ಲಿ ಅಳವಡಿಸಿದ್ದಾರೆ. ಚರಂಡಿಯಲ್ಲೆ ಕುಡಿಯುವ ನೀರಿನ ಪೈಪ್ ಗಳನ್ನು ದುರಸ್ಥಿ ಮಾಡಿದ್ದಾರೆ. ಗ್ರಾಮದಲ್ಲಿ ಸ್ವಚ್ಛತೆ ನೈರ್ಮಲ್ಯ ಇಲ್ಲ. ಸ್ವಚ್ಚತೆ ನೈರ್ಮಲ್ಯ ಕಾಪಾಡಲು ಸ್ಥಳೀಯ ಕೋಟಗಲ್ ಗ್ರಾಮ ಪಂಚಾಯತಿಗೆ ಸೂಚಿಸಿದ್ದೇವೆ ಎಂದರು.

ಗ್ರಾಮದ ಕುಡಿಯುವ ನೀರಿನ ಮೂಲಗಳನ್ನು ಪರೀಕ್ಷೆ ಮಾಡಲಾಗಿದೆ. ಮೊದಲನೇ ಭಾರಿ ಪರೀಕ್ಷೆ ಮಾಡಿದಾಗ ಅಶುದ್ದ ನೀರು ಎಂದು ಗೊತ್ತಾಗಿದೆ. ಕುಡಿಯುವ ನೀರಿನ ಟ್ಯಾಂಕರ್​ಗಳನ್ನು ಸ್ವಚ್ಛಗೊಳಿಸಿ ಎರಡನೆ ಭಾರಿ ಪರೀಕ್ಷೆ ಮಾಡಲಾಗಿದೆ. ಎರಡನೇ ಭಾರಿ ಶುದ್ದ ನೀರು ಎಂದು ವರದಿ ಬಂದಿದೆ. ಆದರೂ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸಾರ್ವಜನಿಕರಿಗೆ ಯಾವುದೇ ಆತಂಕ ಬೇಡ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಎಸ್. ಮಹೇಶಕುಮಾರ್ ತಿಳಿಸಿದ್ದಾರೆ.