ಮನೆ ರಾಜಕೀಯ ಬಿಜೆಪಿ ಸರ್ಕಾರಕ್ಕೆ ಒಂಬತ್ತು ತಿಂಗಳಷ್ಟೇ ಆಯಸ್ಸು: ಸಿ.ಎಂ. ಇಬ್ರಾಹಿಂ

ಬಿಜೆಪಿ ಸರ್ಕಾರಕ್ಕೆ ಒಂಬತ್ತು ತಿಂಗಳಷ್ಟೇ ಆಯಸ್ಸು: ಸಿ.ಎಂ. ಇಬ್ರಾಹಿಂ

0

ಮೈಸೂರು(Mysuru): ಬಿಜೆಪಿ ಸರ್ಕಾರಕ್ಕೆ ಒಂಬತ್ತು ತಿಂಗಳಷ್ಟೇ ಆಯಸ್ಸು. ಬಳಿಕ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಹೆಚ್​ ಡಿ ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ವಿಧಾನ ಪರಿಷತ್ ಟಿಕೆಟ್ ವಿಚಾರವಾಗಿ ಯಾವುದೇ ಗೊಂದಲ ಇಲ್ಲ. ಪಕ್ಷದ ವರಿಷ್ಠ ಹೆಚ್​ ಡಿ ದೇವೇಗೌಡರು, ನಾನು, ಕುಮಾರಸ್ವಾಮಿ ಎಲ್ಲರೂ ಸೇರಿ ಚರ್ಚೆ ಮಾಡಿ ಟಿಕೆಟ್ ಕೊಟ್ಟಿದ್ದೇವೆ. ನಾನು ಯಾವುದೇ ಟಿಕೆಟ್ ಆಕಾಂಕ್ಷಿಯಲ್ಲ, ಕೊಡುವ ಕೆಲಸವನ್ನಷ್ಟೇ ಮಾಡುವುದು ನನ್ನ ಕೆಲಸ ಎಂದು ಇಬ್ರಾಹಿಂ ಹೇಳಿದ್ದಾರೆ.

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಇದೆ. ಆದರೆ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇಲ್ಲ. ಎಲ್ಲಾ ಕಡೆ ಉತ್ತಮ ಅಭ್ಯರ್ಥಿಗಳನ್ನು ಹಾಕಿದ್ದೇವೆ. ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಸಿ.ಎಂ. ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಳಲಿ ಮಸೀದಿಯ ತಾಂಬೂಲ ಪ್ರಶ್ನೆ ವಿಚಾರವಾಗಿ ಮಾತನಾಡಿದ ಇಬ್ರಾಹಿಂ, ಮುಂದಿನ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಾ?. ರಾಜ್ಯದಲ್ಲಿ ಏನಾಗುತ್ತೆ, ಮೋದಿ ಏನಾಗುತ್ತಾರೆ ಎಂದು ಪ್ರಶ್ನೆ ಹಾಕಿ ಎಂದು ವ್ಯಂಗ್ಯವಾಡಿದ್ದಾರೆ. ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಬಿಜೆಪಿ ಹೀಗೆ ಮಾಡುತ್ತಿದೆ. ಹಿಜಾಬ್, ಹಲಾಲ್ ಆಯ್ತು. ಇದೀಗ ಮತ್ತೊಂದು ತಂದಿದ್ದಾರೆ. ಬಸವಣ್ಣನವರ ನಾಡಿನಲ್ಲಿ ಇದೆಲ್ಲಾದಕ್ಕೂ ಆಸ್ಪದ ಇಲ್ಲ. ಮುಮ್ಮಡಿ ಕೃಷ್ಣರಾಜ ಒಡೆಯರ್ ಮುಸ್ಲಿಂ ಹೆಣ್ಣು ಮಕ್ಕಳಿಗೆ ಪರದೆಯ ಜಟಕಾಗಾಡಿ ನೀಡಿದ್ದರು. ಶಾಲೆಗೆ ಹೋಗಲು ಪರದೆಯ ಗಾಡಿಗಳನ್ನು ಬಳಸಲಾಗುತ್ತಿತ್ತು ಎಂದು ಹೇಳಿದರು.

ಸಿದ್ದರಾಮಯ್ಯನ ತಪ್ಪಿನಿಂದ ಪ್ರತಾಪ್ ಸಿಂಹ ಎರಡು ಬಾರಿ ಎಂಪಿ ಆಗಿದ್ದಾರೆ. ಈಗ ಟಿಪ್ಪುಸುಲ್ತಾನ್​ಗೂ ಕೃಷ್ಣರಾಜ ಒಡೆಯರ್​ಗೂ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಶಾಸನ, ಸಮಾಧಿ ಇದೆ. ಅದನ್ನ ಕೃಷ್ಣರಾಜ ಒಡೆಯರ್ ಕಾಪಾಡಿಕೊಂಡು ಬಂದಿದ್ದರು. ರಾಜರಲ್ಲಿ ಒಳ್ಳೆಯ ಸಂಬಂಧ ಇತ್ತು. ಇವರು ಅದನ್ನು ಹಾಳು ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳಿಗೆ ಕೃಷ್ಣರಾಜ ಒಡೆಯರ್ ಅನೇಕ ಕೊಡುಗೆ ನೀಡಿದ್ದಾರೆ. ಅವರನ್ನು ಕೂಡ ಸ್ಮರಿಸುವ ಕೆಲಸ ಮಾಡಬೇಕು ಹೇಳಿದರು.