ಮನೆ ರಾಜಕೀಯ ಬಿಬಿಎಂಪಿ ವಲಯದಲ್ಲಿ ‘ನಂಬಿಕೆ ನಕ್ಷೆ’ ಯೋಜನೆಗೆ ಚಾಲನೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬಿಬಿಎಂಪಿ ವಲಯದಲ್ಲಿ ‘ನಂಬಿಕೆ ನಕ್ಷೆ’ ಯೋಜನೆಗೆ ಚಾಲನೆ: ಡಿಸಿಎಂ ಡಿ.ಕೆ. ಶಿವಕುಮಾರ್

0

ಬೆಂಗಳೂರು: ಕಟ್ಟಡ ನಕ್ಷೆ ಮಂಜೂರಾತಿ ವಿಚಾರದಲ್ಲಿ ಬೆಂಗಳೂರು ನಗರದ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ‘ನಂಬಿಕೆ ನಕ್ಷೆ’ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

Join Our Whatsapp Group

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ತಮ್ಮ ಕಟ್ಟಡ ನಕ್ಷೆಯನ್ನು ಅನುಮೋದಿತ ಕಟ್ಟಡ ವಿನ್ಯಾಸಕಾರರು ಅಥವಾ ಎಂಜಿನಿಯರ್‌ಗಳ ಬಳಿ ಅನುಮೋದಿಸಿಕೊಂಡು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಮಂಜೂರಾತಿ ಪಡೆದುಕೊಳ್ಳುವ ಯೋಜನೆ ಇದಾಗಿದೆ. 50X80 ವಿಸ್ತೀರ್ಣದವರೆಗಿನ ನಿವೇಶನಗಳಿಗೆ ಈ ಯೋಜನೆ ಅನ್ವಯ ಆಗಲಿದೆ’ ಎಂದರು.

‘ಬಿಡಿಎ, ಗೃಹ ನಿರ್ಮಾಣ ಸಂಘದವರು 50X80 ವಿಸ್ತೀರ್ಣದವರೆಗಿನ ನಿವೇಶನಗಳನ್ನೇ ಹೆಚ್ಚು ಅಭಿವೃದ್ಧಿಪಡಿಸಿರುತ್ತಾರೆ. ಇಷ್ಟು ವಿಸ್ತೀರ್ಣದ ನಿವೇಶನದಲ್ಲಿ ಮನೆ ನಿರ್ಮಾಣ ಹಾಗೂ ನವೀಕರಣಕ್ಕೆ ಜನರು ಯಾವುದೇ ತೊಂದರೆಯಿಲ್ಲದೆ ಮುಂದಾಗಬಹುದು. ಅನುಮೋದಿತ ಲೆಕ್ಕ ಪರಿಶೋದಕರಂತೆ ಅನುಮೋದಿತ ಎಂಜಿನಿಯರ್‌ಗಳು ಹಾಗೂ ಕಟ್ಟಡ ವಿನ್ಯಾಸಕಾರರ ಮೂಲಕ ತಾತ್ಕಾಲಿಕ ಕಟ್ಟಡ ನಕ್ಷೆಗೆ ಅನುಮತಿ ನೀಡಲಾಗುವುದು. ನಂತರ ಬಿಬಿಎಂಪಿ ಎಂಜಿನಿಯರ್‌ ಗಳು ಪರಿಶೀಲಿಸುತ್ತಾರೆ ಎಂದರು.

ಮೊದಲು ಬಿಬಿಎಂಪಿಯ ಎರಡು ವಲಯಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಯಶಸ್ವಿಯಾಗಿ ಜಾರಿಯಾದ ಈ ಯೋಜನೆಯ ಸಾಧಕ ಭಾದಕಗಳನ್ನು ಸರಿಪಡಿಸಿ ಈಗ ಎಲ್ಲ ವಲಯಗಳಿಗೆ ವಿಸ್ತರಿಸಲಾಗುತ್ತಿದೆ. ಇದರಿಂದ ಜನರು ಪಾಲಿಕೆಗೆ ಅಲೆಯುವುದು ತಪ್ಪುತ್ತದೆ ಎಂದೂ ಹೇಳಿದರು.

2,795 ರಸ್ತೆಗುಂಡಿ,, ಪ್ರಮುಖ ರಸ್ತೆಗಳ ದುರಸ್ತಿಗೆ ₹660 ಕೋಟಿ:  ‘ಬಿಬಿಎಂಪಿ ವಲಯದಲ್ಲಿ 2,795 ರಸ್ತೆಗುಂಡಿಗಳನ್ನು ಗುರುತಿಸಲಾಗಿದೆ. ಎಲ್ಲ ರಸ್ತೆ ಗುಂಡಿಗಳನ್ನು ಮುಂದಿನ 15 ದಿನಗಳಲ್ಲಿ ಸಂಪೂರ್ಣವಾಗಿ ಮುಚ್ಚಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ₹ 660 ಕೋಟಿ ವೆಚ್ಚದಲ್ಲಿ ಪ್ರಮುಖ ರಸ್ತೆಗಳನ್ನು ದುರಸ್ತಿ ಕೆಲಸ ಕೈಗೆತ್ತಿಕೊಳ್ಳಲಾಗುವುದು ಎಂದರು.

 ಮಳೆ ಬಂದ ತಕ್ಷಣ ನಗರದಾದ್ಯಂತ ಎಲ್ಲೆಲ್ಲಿ ನೀರು ನಿಲ್ಲುತ್ತಿತ್ತು, ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಜನರಿಗೆ ತೊಂದರೆ ಉಂಟಾಗುತ್ತಿತ್ತು. ಅವುಗಳನ್ನು ಭಾಗಶಃ ಸರಿ ಪಡಿಸಲಾಗಿದೆ ಎಂದರು.

ರಾಜಕಾಲುವೆಯ 50 ಮೀ. ಸುತ್ತಳತೆಯಲ್ಲಿ ಯಾವುದೇ ನಿರ್ಮಾಣ ಕಾರ್ಯಗಳನ್ನು ಮಾಡುವಂತಿಲ್ಲ ಎಂದು ಎನ್‌ಜಿಟಿ ನಿಯಮಗಳು ಸೇರಿದಂತೆ ಒಂದಷ್ಟು ನಿಯಮಗಳಿವೆ. ಪ್ರಸ್ತುತ 300 ಕಿ.ಮೀ ಅನ್ನು ಗುರುತಿಸಿ 30 ಅಡಿ ರಸ್ತೆ ನಿರ್ಮಾಣ ಮಾಡಲಾಗುವುದು. ಭೂಮಿ ಬಿಟ್ಟುಕೊಡುವ ಖಾಸಗಿ ಜಮೀನುಗಳ ಮಾಲೀಕರಿಗೆ ಪರಿಹಾರವಾಗಿ ಟಿಡಿಆರ್ ನೀಡಲಾಗುವುದು ಎಂದರು.

ಹೆಬ್ಬಾಳ, ನಾಗಾವರ, ಬೆಳ್ಳಂದೂರು ಅಕ್ಕಪಕ್ಕ, ಬೆಂಗಳೂರು ದಕ್ಷಿಣ ಭಾಗದಲ್ಲಿ ಒಂದಷ್ಟು ಕಡೆ ಭೂಮಿ ಗುರುತಿಸಲಾಗಿದೆ. ಮೊದಲ ಹಂತದಲ್ಲಿ 100 ಕಿ.ಮೀ ದೂರ ಕೆಲಸ ಮಾಡಲಾಗುವುದು. ಇದಕ್ಕಾಗಿ ₹ 200 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಈ ವಿಚಾರವನ್ನು ಸಚಿವ ಸಂಪುಟ ಸಭೆ ಹಾಗೂ ವಿರೋಧ ಪಕ್ಷಗಳ ನಾಯಕರ ಜೊತೆ ನಡೆದ ಸಭೆಗಳಲ್ಲೂ ಪ್ರಸ್ತಾಪಿಸಲಾಗಿದೆ. ಈ ರಸ್ತೆಗಳಲ್ಲಿ ಬಸ್ ಓಡಾಟಕ್ಕೆ ಅವಕಾಶವಿಲ್ಲ. ಬದಲಾಗಿ ಶಾಲಾ, ನಾಗರಿಕರ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗುವುದು’ ಎಂದು ವಿವರಿಸಿದರು.

ಇನ್ನೊಂದು ವಾರದಲ್ಲಿ ಐದನೇ ಹಂತದ ನೀರು ಸರಬರಾಜು ಯೋಜನೆ ಆರಂಭಿಸಲಾಗುವುದು. ಈ ಬಗ್ಗೆ ಆ ಭಾಗದ ಶಾಸಕರು ಗಮನ ಸೆಳೆದಿದ್ದಾರೆ ಎಂದರು.

ಶಾಲಾ ಮಕ್ಕಳಿಂದ ಸ್ವಚ್ಚತೆ ಅರಿವು

ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಕರ್ನಾಟಕದಲ್ಲಿ ಅಧಿಕಾರ ವಹಿಸಿಕೊಂಡು 100 ವರ್ಷಗಳು ಸಂದಿವೆ. ಇದಕ್ಕಾಗಿ ನಗರದಾದ್ಯಂತ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಗುವುದು. ಇದೇ ವೇಳೆ ಒಂದು ಸಾವಿರ ಶಾಲಾ ಮಕ್ಕಳು ಆನ್ ಲೈನ್ ಮೂಲಕ ಪ್ರತಿಜ್ಞಾವಿಧಿ ತೆಗೆದುಕೊಳ್ಳಲಿದ್ದಾರೆ ಎಂದರು.

ರಸ್ತೆ ಬದಿ ಹಾಗೂ ರಸ್ತೆಗಳಲ್ಲಿ ಕಸ ಎಸೆಯುವುದರ ವಿರುದ್ಧ ಜಾಗೃತಿ ಮೂಡಿಲಾಗುವುದು. ಮಕ್ಕಳಿಂದ ಕಸ ಎಸೆಯುವವರಿಗೆ ತಿಳಿಹೇಳುವ ಕೆಲಸ ಮಾಡಲಾಗುವುದು. ಅ. 2ರಂದು ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ರಸ್ತೆಗುಂಡಿ ಸಮಸ್ಯೆ ಹೆಚ್ಚಾಗುತ್ತಿರುವ ಬಗ್ಗೆ ಕೇಳಿದಾಗ ‘ಸಾರ್ವಜನಿಕರಿಗಾಗಿ ʼರಸ್ತೆ ಗುಂಡಿ ಗಮನʼ ಎನ್ನುವ ತಂತ್ರಾಂಶವನ್ನು ಪರಿಚಯಿಸಿದ್ದು, ಅದರಲ್ಲಿ ಗುಂಡಿಗಳ ಫೋಟೋ ತೆಗೆದು ಅಪ್‌ಲೋಡ್‌ ಮಾಡುವ ವ್ಯವಸ್ಥೆ ರೂಪಿಸಲಾಗಿದೆ. ರಸ್ತೆಗಳ ವೀಕ್ಷಣೆಗೆಂದೇ ನನ್ನ ಹಳೆಯ ಬೈಕ್ ದುರಸ್ತಿ ಮಾಡಿಸಿದ್ದೇನೆ. ಅಧಿಕಾರಿಗಳು ಮುಖ್ಯರಸ್ತೆಗಳನ್ನು ಮಾತ್ರ ತೋರಿಸುತ್ತಾರೆ. ಒಳ ರಸ್ತೆಗಳನ್ನು ಬೈಕ್‌ನಲ್ಲಿ ಓಡಾಡಿ ನಾನು ವೀಕ್ಷಿಸುತ್ತೇನೆ. ಜೊತೆಗೆ ಆಯುಕ್ತರನ್ನು ಕುಳ್ಳಿರಿಸಿಕೊಂಡು ಒಂದು ಸುತ್ತು ಹೋಗುತ್ತೇನೆ ಎಂದರು.

ಬಿಬಿಎಂಪಿ ಗುತ್ತಿಗೆದಾರರು ಬಿಲ್ ಬಾಕಿ ಬಗ್ಗೆ ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಕೇಳಿದಾಗ  ಗುತ್ತಿಗೆದಾರರ ನೋವು ನನಗೂ ಅರ್ಥವಾಗುತ್ತದೆ. ಶೇ 50ರಷ್ಟಿದ್ದ ಬಿಲ್ ಬಾಕಿಯನ್ನು ಶೇ 75ಕ್ಕೆ ಇಳಿಸಿದ್ದೇನೆ. ಒಂದಷ್ಟು ಭಾಗ ಆಯೋಗದ ಮುಂದಿದೆ. ಇದು ಇತ್ಯರ್ಥವಾದ ನಂತರ ಕಾನೂನಾತ್ಮಕವಾಗಿ ಹೇಗೆ ಸಹಾಯ ಮಾಡಲಾಗುವುದೋ ಆ ರೀತಿ ಅವರ ನೆರವಿಗೆ ನಿಲ್ಲಲಾಗುವುದು ಎಂದರು.

ಗುತ್ತಿಗೆದಾರರು ಪ್ರತಿಭಟನೆ ಮಾಡುತ್ತೇನೆ. ಕೆಲಸ ಮಾಡುವುದಿಲ್ಲವೆಂದರೆ ಮತ್ತೊಬ್ಬ ಬಂದು ಕೆಲಸ ನಿರ್ವಹಿಸುತ್ತಾನೆ. ಸರ್ಕಾರವನ್ನು ಬ್ಲಾಕ್ ಮೇಲ್ ಮಾಡಬಾರದು’ ಎಂದೂ ಎಚ್ಚರಿಕೆ ನೀಡಿದರು.