ಮನೆ ಕಾನೂನು ತಿಪಟೂರು: ಶುಂಠಿ ಜಮೀನಿನಲ್ಲಿ ಜೀತದಾಳುಗಳಂತೆ  36 ಕಾರ್ಮಿಕರ ರಕ್ಷಣೆ

ತಿಪಟೂರು: ಶುಂಠಿ ಜಮೀನಿನಲ್ಲಿ ಜೀತದಾಳುಗಳಂತೆ  36 ಕಾರ್ಮಿಕರ ರಕ್ಷಣೆ

0

ತಿಪಟೂರು: ತಾಲ್ಲೂಕಿನ ಹಾಲ್ಕುರಿಕೆ, ಮಂಜುನಾಥಪುರ ಸುತ್ತಮುತ್ತಲಿನ ಪ್ರದೇಶದಲ್ಲಿನ ಶುಂಠಿ ಜಮೀನಿನಲ್ಲಿ ಜೀತದಾಳುಗಳಂತೆ, ಬಲವಂತವಾಗಿ ದುಡಿಯುತ್ತಿದ್ದ 36 ಕಾರ್ಮಿಕರನ್ನು ಪೊಲೀಸರು ಬುಧವಾರ ರಾತ್ರಿ ರಕ್ಷಿಸಿದ್ದಾರೆ.

Join Our Whatsapp Group

ಈ ಭಾಗದ ಕೆಲ ಪ್ರಭಾವಿಗಳು ರೈತರಿಂದ ನೂರಾರು ಎಕರೆ ಜಮೀನು ಗುತ್ತಿಗೆ ಪಡೆದು ಶುಂಠಿ ಬೆಳೆದಿದ್ದರು. ಮೈಸೂರು, ಚಾಮರಾಜನಗರ, ಕೊಳ್ಳೇಗಾಲ, ಬಳ್ಳಾರಿ, ವಿಜಯಪುರ ಸೇರಿ ವಿವಿಧ ಜಿಲ್ಲೆಗಳ ಕಾರ್ಮಿಕರಿಗೆ ಹೆಚ್ಚಿನ ಕೂಲಿ ಆಸೆ ತೋರಿಸಿ ಜಮೀನಿನಲ್ಲಿ ಕೆಲಸ ಮಾಡಲು ಕರೆ ತಂದಿದ್ದರು. ‘ಅಗತ್ಯ ಸೌಲಭ್ಯ, ಕೂಲಿ ಹಣ ಕೊಡದೆ ದುಡಿಸಿ ಕೊಳ್ಳಲಾಗುತ್ತಿದೆ. ಕೆಲಸದ ಸ್ಥಳದಿಂದ ಹೊರ ಹೋಗಲು ಬಿಡುತ್ತಿಲ್ಲ. ಪ್ರಶ್ನೆ ಮಾಡಿದರೆ ಹಲ್ಲೆ ಮಾಡುತ್ತಿದ್ದಾರೆ’ ಎಂದು ಕಾರ್ಮಿಕರು ಆರೋಪಿಸುತ್ತಿದ್ದಾರೆ.

ನಮ್ಮ ಬಳಿ ಇದ್ದ ಆಧಾರ್‌ಕಾರ್ಡ್, ಗುರುತಿನ ಚೀಟಿ, ಮೊಬೈಲ್‌ ಕಿತ್ತುಕೊಂಡು ಹೆದರಿಸಿ, ಬೆದರಿಸಿ ಜಮೀನಿನ ಶೆಡ್‌ನಲ್ಲಿ ಇರಿಸಿದ್ದಾರೆ. ಶೆಡ್‌ನಿಂದ ಹೊರ ಹೋಗದಂತೆ ಕೆಲವರನ್ನು ಕಾವಲಿಟ್ಟಿದ್ದಾರೆ. ಜಾಸ್ತಿ ಮಾತನಾಡಿದರೆ ಹೊಡೆಯುತ್ತಾರೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ಕೆಲಸ ಮಾಡಿದರೂ ಕೂಲಿ ಕೊಟ್ಟಿಲ್ಲ. ತುಂಬಾ ದಿನ ಒಂದು ಕಡೆ ಇರಲು ಬಿಡುತ್ತಿಲ್ಲ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ವಿವಿಧ ಕಡೆ ಇರುವ ಶುಂಠಿ ಕ್ಯಾಂಪ್‌ಗಳಲ್ಲಿ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಲಾಗಿತ್ತು. ಕಳೆದ ಕೆಲವು ದಿನಗಳ ಹಿಂದೆ ಹಾಲ್ಕುರಿಕೆ, ಮಂಜುನಾಥಪುರ ಗ್ರಾಮಗಳ ಬಳಿಗೆ ಕರೆದುಕೊಂಡು ಬಂದಿದ್ದರು. ಇದರ ಮಾಹಿತಿ ಪಡೆದ ಹೊನ್ನವಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರ ನೆರವಿನಿಂದ ಕಾರ್ಮಿಕರನ್ನು ರಕ್ಷಿಸಿದ್ದು, ಅವರಿಗೆ ಹೊನ್ನವಳ್ಳಿ ಸಮುದಾಯ ಭವನದಲ್ಲಿ ಆಶ್ರಯ ಕಲ್ಪಿಸಲಾಗಿದೆ.