ಮನೆ ಸ್ಥಳೀಯ ದಸರಾ ಪ್ರಾಯೋಜಕತ್ವ ವಹಿಸಿಕೊಳ್ಳಿ, ನಿಮ್ಮ ವ್ಯಾಪಾರ ಉದ್ದಿಮೆಗಳ ಉದ್ದೀಪನಗೊಳಿಸಿಕೊಳ್ಳಿ: ಹೆಚ್.ಸಿ.ಎಂ

ದಸರಾ ಪ್ರಾಯೋಜಕತ್ವ ವಹಿಸಿಕೊಳ್ಳಿ, ನಿಮ್ಮ ವ್ಯಾಪಾರ ಉದ್ದಿಮೆಗಳ ಉದ್ದೀಪನಗೊಳಿಸಿಕೊಳ್ಳಿ: ಹೆಚ್.ಸಿ.ಎಂ

0

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮದಲ್ಲಿ ಪ್ರಾಯೋಜಕತ್ವ ನೀಡುವ ಮೂಲಕ ತಮ್ಮ ವ್ಯಾಪಾರ ವಹಿವಾಟುಗಳನ್ನು ವಿಸ್ತರಿಸಿಕೊಳ್ಳುವ ಸದಾವಕಾಶವನ್ನು ಸದುಪಯೋಗಿಸಿಕೊಳ್ಳಿ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಹೇಳಿದರು

Join Our Whatsapp Group

 ನಗರದ ಲಲಿತ ಮಹಲ್ ಪ್ಯಾಲೇಸ್ ನಲ್ಲಿಂದು ನಡೆದ ದಸರಾ ಪ್ರಾಯೋಜಕರ ಸಭೆಯಲ್ಲಿ ಮಾತನಾಡಿದ ಅವರು, ದಸರಾ ಕಾರ್ಯಕ್ರಮಕ್ಕೆ ದೇಶ ವಿದೇಶಗಳಿಂದ ಸಾವಿರಾರು ಜನ ಆಗಮಿಸುತಿದ್ದು, ತಮ್ಮ ಉತ್ಪನ್ನಗಳ, ಕಂಪನಿ, ಕೈಗಾರಿಕೆಗಳನ್ನು, ಜನರ ಬಳಿ ಕೊಂಡೊಯ್ಯಲು ಉತ್ತಮ ವೇದಿಕೆ ಇದಾಗಿದೆ ಹಾಗೂ ವಿಜೃಂಭಣೆಯ ದಸರಾದಲ್ಲಿ ಪಾಲುದಾರರಾದ ಕೀರ್ತಿ ನಿಮ್ಮದಾಗಲಿದೆ ಎಂದರು.

ಪ್ರಾಯೋಜಕತ್ವದಲ್ಲಿ ಜಂಬೂಸವಾರಿ, ಅಂಬಾರಿ, ಪ್ಲಾಟಿನಂ, ಗೋಲ್ಡನ್, ಸಿಲ್ವರ್ ಎಂಬ ವಿಧಗಳಿದ್ದು ತಾವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅದಲ್ಲದೆ ವಿವಿಧ ಕಾರ್ಯಕ್ರಮಗಳಲ್ಲಿ ಸ್ಥಳಾವಕಾಶದ ಅವಕಾಶಗಳಿದ್ದು ಬಳಸಿಕೊಳ್ಳಿ , ಇದರಲ್ಲಿ ಯಾವುದೇ ಒತ್ತಾಯವಲ್ಲ, ಸ್ವಯಂಪ್ರೇರಿತವಾಗಿ ಮುಂದೆ ಬನ್ನಿ ಎಂದರು.

ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ಆಚರಣೆ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅಂದು ಬೀದರ್‌ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ. ಈ ಮಾನವ ಸರಪಳಿಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಎಂದರು.

 ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ತಾವು ಈ ಹಿಂದೆಯೂ ಸಂಪೂರ್ಣ ಸಹಕಾರ ನೀಡಿದ್ದೀರಿ, ಈ ಬಾರಿಯೂ ಸಹಕಾರ ಬಯಸುತ್ತೇವೆ. ತಮಗೆ ಅನುಕೂಲವಾಗುವಂತಹ ಪ್ರಾಯೋಜಕತ್ವವನ್ನು ತಾವು ಉಪಯೋಗಿಸಿಕೊಳ್ಳಬಹುದಾಗಿದ್ದು, ತಕ್ಷಣಕ್ಕೆ ತಿಳಿಸಲಾಗದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಯೂ ತಿಳಿಸಬಹುದಾಗಿದೆ ಎಂದರು.

 ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಸವಿತ ಮಾತನಾಡಿ, ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಗಳಲ್ಲಿ, ಪ್ರವೇಶ ದ್ವಾರಗಳಲ್ಲಿ, ವಿವಿಧ ಸ್ಟಾಲ್ ಗಳಲ್ಲಿ ಹಾಗೂ ಯುವ ದಸರ, ಯುವ ಸಂಭ್ರಮ, ಆಹಾರ ಮೇಳ, ಪ್ಲವರ್ ಶೋ, ಕುಸ್ತಿ ಇನ್ನು ಮುಂತಾದ ವೇದಿಕೆಗಳಲ್ಲಿ ತಮ್ಮ ಜಾಹೀರಾತುಗಳನ್ನು ಹಾಕುವ ಮೂಲಕ ಸದುಪಯೋಗಪಡಿಸಿಕೊಳ್ಳಿ ಎಂದರು.

 ಜಂಬೂ ಸವಾರಿ ಪ್ರಾಯೋಜಕತ್ವದಲ್ಲಿ 2 ಕೋಟಿ, ಅಂಬಾರಿ ಪ್ರಾಯೋಜಕತ್ವದಲ್ಲಿ 1 ಕೋಟಿ, ಪ್ಲಾಟಿನಂ ಪ್ರಾಯೋಜಕತ್ವದಲ್ಲಿ 75 ಲಕ್ಷ, ಗೋಲ್ಡನ್ ಪ್ರಾಯೋಜಕತ್ವದಲ್ಲಿ 50 ಲಕ್ಷ, ಸಿಲ್ವರ್ ಪ್ರಾಯೋಜಕತ್ವದಲ್ಲಿ 25 ಲಕ್ಷ ಸ್ಪಾನ್ಸರ್ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಪೊಲೀಸ್ ಕಮಿಷನರ್ ಸೀಮಾಲಾಟ್ಕರ್, ಸಿಇಒ ಗಾಯತ್ರಿ ಕೆ.ಎಂ. ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಸೇರಿದಂತೆ ಉದ್ಯಮಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.